ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಗಳ ಸುರಿಮಳೆ ನಮಗೆ ಬೇಡ

Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಭರವಸೆಗಳ ಸುರಿಮಳೆ ನಮಗೆ ಬೇಡ

ಅಧಿಕಾರಕ್ಕೆ ಬರುವಾಗ ನೀವು ನೀಡುವ ಭರವಸೆಗಳ ಸುರಿಮಳೆ ನಮಗೆ ಬೇಡ. ಮಾಡಬೇಕಾದ ಕೆಲಸ ಕಾರ್ಯಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಸಕಾಲದಲ್ಲಿ ಮಾಡಿ, ಜನರ ಕೊರತೆಗಳನ್ನು ಪರಿಹರಿಸಿ. ಆಗ ಮತದಾರ ಪ್ರಭು ನಿಮ್ಮನ್ನು ಮೆಚ್ಚುವನು. ಸುಳ್ಳು ಭರವಸೆ ಸಾಕು.

–ಶ್ರೀದೇವಿ ನಿಂ. ದೇಸಾಯಿ, ಜಮಖಂಡಿ, ಹಿಪ್ಪರಗಿ

ನಿಂತ ನೆಲದ ಅರಿವು ಮೂಡಲಿ
ಮಾರ್ಚ್ 4ರಂದು ‘ಪ್ರಜಾ ಮತ’ದಲ್ಲಿ ಪ್ರಕಟವಾದ ‘ಮರಗಳಿಗೂ ಮತವಿದ್ದರೆ ವರದಿ ಜಾರಿಯಾಗುತ್ತಿತ್ತೇ?’ ಲೇಖನವು ಕಾಡಿನಂಗಳದ ಸತ್ಯವನ್ನು ತೆರೆದಿಟ್ಟಿದೆ. ಬದುಕಿನ ಅಡಿಪಾಯವಾಗಿರುವ ನೆಲ- ಜಲ- ಕಾಡಿನ ಸಂರಕ್ಷಣೆಯ ವಿಷಯವನ್ನು ಚುನಾವಣಾ ಸಮಯದ ವಾಗ್ವಾದಗಳ ಮುಖ್ಯವಾಹಿನಿಗೆ ತರುವ ಈ ಪ್ರಯತ್ನ ಸ್ವಾಗತಾರ್ಹ ಮತ್ತು ಈ ಕಾಲದ ಅಗತ್ಯ.

ಪಶ್ಚಿಮಘಟ್ಟದ ಶ್ರೇಣಿಯೂ ಒಳಗೊಂಡಂತೆ ನಾಡಿನ ಕಾಡು ಹಾಗೂ ಜಲಮೂಲಗಳನ್ನು ಅತ್ಯಂತ ಕಳಪೆಯಾಗಿ ಈವರೆಗೆ ನಿರ್ವಹಿಸಿದ್ದರ ಫಲವನ್ನು ನಾವೀಗ ಉಣ್ಣುತ್ತಿದ್ದೇವೆ. ಕರಾವಳಿಯಲ್ಲಿನ ಅವೈಜ್ಞಾನಿಕ ಅಭಿವೃದ್ಧಿ ನೀತಿಯಿಂದಾಗಿ, ಇದೀಗ ಇಲ್ಲಿ ಸಿಹಿನೀರು ಹಾಗೂ ಮೀನಿಗೂ ಕ್ಷಾಮ ತಲೆದೋರಿದೆ.

ಮಲೆನಾಡಿನ ಅಳಿದುಳಿದ ನೈಸರ್ಗಿಕ ಕಾಡುಗಳು ಅತಿಕ್ರಮಣಕ್ಕೆ ಬಲಿಯಾಗಿ ನದಿ ತೊರೆಗಳು ಬತ್ತಿವೆ; ವಿನಾಶದಂಚಿನ ವನ್ಯಪ್ರಾಣಿಗಳು ಊರಿಗೆ ಲಗ್ಗೆ ಇಡುತ್ತಿವೆ. ಬರದ ಉರಿಯ ತಡೆಗಟ್ಟುತ್ತಿದ್ದ ಬಯಲುನಾಡಿನ ಗೋಮಾಳಗಳು ಉದ್ದಿಮೆಗಳಿಗೆ ಬಲಿಯಾಗಿ, ಕೆರೆಗಳ ನೀರನ್ನು ಬಳಸಲಾರದಷ್ಟು ಮಾಲಿನ್ಯಗೊಂಡಿವೆ. ಹವಾಮಾನ ಬದಲಾವಣೆಯಿಂದ ಕೃಷಿ ಸರಾಸರಿ ಉತ್ಪನ್ನ  ಕಡಿಮೆಯಾಗಿರುವುದನ್ನು ಕೇಂದ್ರ ಸರ್ಕಾರದ ಇತ್ತೀಚಿನ ಹಣಕಾಸು ಸಮೀಕ್ಷೆಯೇ ಒಪ್ಪಿಕೊಂಡಿದೆ! ಈ ಗಂಭೀರ ವಿಷಯಗಳೆಲ್ಲ ಆಡಳಿತದ ಕೇಂದ್ರಬಿಂದುವಿಗೆ ಈಗಲೂ ಬಾರದಿದ್ದರೆ, ಇನ್ಯಾವಾಗ ಈ ಬಗ್ಗೆ ಚಿಂತಿಸುವುದು?

ರಾಜ್ಯದ ಪ್ರತಿ ಪ್ರದೇಶಕ್ಕೂ ಸೂಕ್ತವಾದ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಸೂತ್ರಗಳನ್ನು ರೂಪಿಸುವ ಜರೂರತ್ತಿದೆ. ಇವನ್ನು ಸೂಕ್ತ ಯೋಜನೆ, ಸಾಕಷ್ಟು ಅನುದಾನ ಹಾಗೂ ಪಾರದರ್ಶಕ ಅನುಷ್ಠಾನದೊಂದಿಗೆ ಕಾರ್ಯಗತಗೊಳಿಸುವ ಜವಾಬ್ದಾರಿ ಸರ್ಕಾರ ರೂಪಿಸುವ ರಾಜಕೀಯ ಪಕ್ಷಗಳದ್ದೇ ಅಲ್ಲವೇ?

ಗೋಮಾಳ ಹಾಗೂ ಅರಣ್ಯ ಪ್ರದೇಶಗಳ ಅತಿಕ್ರಮಣ, ನದಿಕೊಳ್ಳಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ, ಕರಾವಳಿಯ ಹಿನ್ನೀರ ಪ್ರದೇಶಗಳ ನಾಶ... ಇತ್ಯಾದಿಗಳನ್ನೆಲ್ಲ ತಡೆಯುವ ಹಾಗೂ ಪ್ರಶ್ನಿಸುವ ಧೈರ್ಯವನ್ನು ನಾಗರಿಕರು ತೋರತೊಡಗಿದರೆ ಮಾತ್ರ, ಚುನಾವಣೆಯ ಹೊಸ್ತಿಲಲ್ಲಾದರೂ ರಾಜಕೀಯ ನೇತಾರರಿಗೆ ನಿಂತ ನೆಲದ ಮಹತ್ವ ಅರಿವಾದೀತು.

– ಕೇಶವ ಎಚ್. ಕೊರ್ಸೆ, ಸಂರಕ್ಷಣಾ ಜೀವಶಾಸ್ತ್ರಜ್ಞ, ಶಿರಸಿ

ಏನು ಮಾಡುತ್ತಿದ್ದಿರಿ?
ಚುನಾವಣೆ ಸಮಯದಲ್ಲೇ ಯಾಕೆ ನವ ಕರ್ನಾಟಕ ನಿರ್ಮಾಣ ಜ್ಞಾಪಕಕ್ಕೆ ಬರುತ್ತದೆ? ಹಾಗಾದರೆ ಈ 5 ವರ್ಷ ಏನು ಮಾಡಿದ್ದೀರ? ಅಧಿಕಾರದಲ್ಲಿದ್ದಾಗ ಯಾಕೆ ನವ ಕರ್ನಾಟಕ ನಿರ್ಮಾಣ ಮಾಡಲಿಲ್ಲ?
– ಸಂತೋಷ್‌ ಡಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT