ಬೆಂಗಳೂರು: ಬಿಲ್ಡಿಂಗ್ ಪ್ಲಾನ್ (ಕಟ್ಟಡ ಯೋಜನೆ), ಭೂ ಪರಿವರ್ತನೆ ಮತ್ತು ಬಡಾವಣೆಗಳ ಅನುಮೋದನೆಗಾಗಿ ಇನ್ನು ಮುಂದೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.ಆನ್ಲೈನ್ ಮೂಲಕವೇ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಇದೇ 11ರಿಂದ ರಾಜ್ಯದಲ್ಲಿ ಜಾರಿ ಆಗಲಿದೆ.
‘ನಗರಾಭಿವೃದ್ಧಿ ಇಲಾಖೆ ಇದಕ್ಕಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದು, ಈ ವ್ಯವಸ್ಥೆ ದೇಶದಲ್ಲೇ ಪ್ರಥಮ’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಅರ್ಜಿದಾರರು ಅನುಮೋದನೆಗಾಗಿ ಆನ್ಲೈನ್ ಮೂಲಕ ಸರಿಯಾದ ಮಾಹಿತಿ ನೀಡಿದರೆ ತಕ್ಷಣವೇ ಅರ್ಜಿ ಸ್ವೀಕಾರಗೊಳ್ಳುತ್ತದೆ. ಮಾಹಿತಿ ಸರಿ ಇಲ್ಲದೇ ಇದ್ದರೆ, ಸರಿ ಇಲ್ಲ ಎಂಬ ಮಾಹಿತಿ ಬರುತ್ತದೆ. ಸರಿಯಾದ ಮಾಹಿತಿ ನೀಡಿದರೆ ಮಾತ್ರ ಅನುಮೋದನೆಗೆ ಅರ್ಹವಾಗುತ್ತದೆ’ ಎಂದರು.
‘ಈಗಿರುವ ವ್ಯವಸ್ಥೆಯಲ್ಲಿ ಬಿಲ್ಡಿಂಗ್ ಪ್ಲಾನ್ ಅಥವಾ ಬಡಾವಣೆಗಳ ಅನುಮೋದನೆಗೆ ನಿರಾಕ್ಷೇಪಣಾ ಪತ್ರ ಪಡೆಯಲು ವಿವಿಧ ಇಲಾಖೆಗಳ ಬಾಗಿಲು ತಟ್ಟಬೇಕು. ಆನ್ಲೈನ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅರ್ಜಿದಾರ ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ. ಯಾರಿಗೂ ಲಂಚ ಕೊಡಬೇಕಾಗಿಲ್ಲ. ಆನ್ಲೈನ್ ಮೂಲಕವೇ ಅರ್ಜಿ ಯಾವ ಇಲಾಖೆಗೆ ಹೋಗಬೇಕೋ ಸ್ವಯಂಚಾಲಿತವಾಗಿ ರವಾನೆಯಾಗುತ್ತದೆ. ಅಲ್ಲಿ ಅರ್ಜಿಯ ಪರಿಶೀಲನೆ ನಡೆಯುತ್ತದೆ. ಕೆಲವೇ ದಿನಗಳಲ್ಲಿ ಒಪ್ಪಿಗೆ ಸಿಗುತ್ತದೆ’ ಎಂದರು.
‘ಅರ್ಜಿಗೆ 15 ದಿನಗಳಲ್ಲಿ ಉತ್ತರ ಬರದೇ ಇದ್ದರೆ ಸ್ವೀಕಾರಗೊಂಡಿದೆ ಎಂದೇ ಪರಿಗಣಿಸಲಾಗುತ್ತದೆ. ಬಡ ಮತ್ತು ಮಧ್ಯಮ ವರ್ಗದವರು 30x40 ಅಡಿ ಅಳತೆ ನಿವೇಶನಕ್ಕೆ ಸ್ವಯಂ ಪ್ರಮಾಣಪತ್ರ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಅರ್ಜಿದಾರರು ಪರಿಪೂರ್ಣ ಮಾಹಿತಿ ನೀಡಿ ಆನ್ಲೈನ್ ಮೂಲಕ ತಕ್ಷಣವೇ ಪ್ರಮಾಣ ಪತ್ರ ಪಡೆದುಕೊಳ್ಳಬಹುದು’ ಎಂದು ಹೇಳಿದರು.