ಹೊಸಪೇಟೆ: ‘ಕೊರೊನಾ ಸೋಂಕು ಹರಡದಂತೆ ತಡೆಯಲು ನಿಷೇಧಾಜ್ಞೆ ಘೋಷಿಸಿದರೂ ಅದನ್ನು ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿರುವವರನ್ನು ವಶಕ್ಕೆ ಪಡೆದು ಒಂದು ದಿನ ಅನ್ನ, ನೀರು ಕೊಡದೇ ಠಾಣೆಯಲ್ಲಿ ಕೂಡಿ ಹಾಕಬೇಕು’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಶುಕ್ರವಾರ ಸಂಜೆ ಇಲ್ಲಿ ನಡೆದ ಕೊರೊನಾ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಇಂತಹ ಗಂಭೀರ ಸಂದರ್ಭದಲ್ಲಿಯೂ ಮನೆಯಿಂದ ಸುಖಾಸುಮ್ಮನೆ ಕೆಲವರು ಓಡಾಡುತ್ತಿದ್ದಾರೆ. ಇದು ಸರಿಯಲ್ಲ. ಅವರಿಗೆ ಪೊಲೀಸರು ಬೆತ್ತದಿಂದ ಹೊಡೆಯುವುದರ ಬದಲು, ಠಾಣೆಗೆ ಒಯ್ದು ಕೂಡಿ ಹಾಕಬೇಕು’ ಎಂದು ತಿಳಿಸಿದರು.