ಹಾಸನ: ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುವ ಮೂಲಕ, ರಾಜಕೀಯದ ಶಕ್ತಿ ಕೇಂದ್ರ ಎನಿಸಿರುವ ಹಾಸನ ಜಿಲ್ಲೆಯು ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದೆ.
ಹೊಳೆ ನರಸೀಪುರ ತಾಲ್ಲೂಕು ಹರದನಹಳ್ಳಿಯಲ್ಲಿ ಎಚ್.ಡಿ.ದೇವೇಗೌಡ– ಚನ್ನಮ್ಮ ದಂಪತಿಯ ಮೂರನೇ ಮಗನಾಗಿ 1959ರ ಡಿ. 16ರಂದು ಜನಿಸಿದ ಅವರು, ಶಾಲಾ ದಿನಗಳ ಬಹುಭಾಗವನ್ನು ಪಟ್ಟಣದ ಕೋಟೆ ಬೀದಿಯಲ್ಲಿದ್ದ ಬಾಡಿಗೆ ಮನೆಯಲ್ಲಿ ಕಳೆದರು.
ದೇವೇಗೌಡರದ್ದು 6 ಮಕ್ಕಳ ತುಂಬು ಸಂಸಾರ. ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅವರು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಸಲುವಾಗಿ ಹುಟ್ಟೂರು ಹರದನಹಳ್ಳಿಯಿಂದ ಕುಟುಂಬವನ್ನು ಹೊಳೆನರಸೀಪುರದ ಕೋಟೆ ಬೀದಿಯ ಬಾಡಿಗೆ ಮನೆಗೆ ಸ್ಥಳಾಂತರಿಸಿದ್ದರು.
ಕುಮಾರಸ್ವಾಮಿ 5ರಿಂದ 7ನೇ ತರಗತಿವರೆಗೆ ಪಾರ್ಕ್ ಪಕ್ಕದಲ್ಲಿರುವ ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. 8ನೇ ತರಗತಿಯನ್ನು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ, 9ನೇ ತರಗತಿಯನ್ನು ಹಾಸನದ ಸಂತ ಜೋಸೆಫರ ಶಾಲೆಯಲ್ಲಿ, 10ನೇ ತರಗತಿಯನ್ನು ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಶಾಲೆಯಲ್ಲಿ ಪೂರೈಸಿದ್ದಾರೆ.
(ಹೊಳೆನರಸೀಪುರದಲ್ಲಿ ಕುಮಾರಸ್ವಾಮಿ ಅವರು ವ್ಯಾಸಂಗ ಮಾಡಿದ ಶಾಲೆ)
1972ರ ವೇಳೆಗೆ ರಾಜಕೀಯದಲ್ಲಿ ಹೆಚ್ಚು ತೊಡಗಿಕೊಂಡಿದ್ದ ಗೌಡರು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಹೊಳೆನರಸೀಪುರದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡರು. ಜಯನಗರದಲ್ಲಿರುವ ವಿಜಯಾ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ, ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿ
ದ್ದಾರೆ. ಶಿಕ್ಷಣದ ಜತೆಗೆ ಫುಟ್ಬಾಲ್, ಬ್ಯಾಡ್ಮಿಂಟನ್ನಲ್ಲಿ ಅವರು ಉತ್ತಮ ಆಟಗಾರರಾಗಿದ್ದರು.
ಕುಮಾರಸ್ವಾಮಿ ಬಾಲ್ಯ ಕಳೆದ ಮನೆಯನ್ನು ನಂತರದಲ್ಲಿ ದೇವೇಗೌಡರ ಸಂಬಂಧಿಕರೇ ಖರೀದಿಸಿದ್ದು, ಅಲ್ಲಿ ಈಗ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ.
ಈ ಹಿಂದೆ 20 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶುವೈದ್ಯ, ನರ್ಸಿಂಗ್ ಕಾಲೇಜಿನ ಜತೆಗೆ ನೂತನವಾಗಿ 60 ಪ್ರೌಢಶಾಲೆ, 46 ಪದವಿ ಪೂರ್ವ, 11 ಪದವಿ ಕಾಲೇಜು, 2 ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆಯಲು ಕಾರಣರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.