ಕಲಬುರ್ಗಿ: ‘ವಿವಿಧ ಇಲಾಖೆಗಳ ಸುಪರ್ದಿಯಲ್ಲಿರುವ ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ’ ರಚನೆಗೆ ಸಂಬಂಧಿಸಿದ ಕಾಯ್ದೆಗೆ ವಾರದಲ್ಲಿ ತಿದ್ದುಪಡಿ ತರಲಾಗುವುದು’ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
‘ಈ ಪ್ರಾಧಿಕಾರದ ಉಸ್ತುವಾರಿಯಲ್ಲಿಯೇ ಒತ್ತುವರಿ ಹಾಗೂ ಹೂಳು ತೆರವು ಆರಂಭಿಸಲಾಗುವುದು. ಇದಕ್ಕಾಗಿ ₹60 ಕೋಟಿ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ರಾಜ್ಯದಾದ್ಯಂತ 1,251 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಭಾನುವಾರ ತಿಳಿಸಿದರು.
‘ರಾಜ್ಯದಲ್ಲಿ ಒಟ್ಟು 36 ಸಾವಿರ ಕೆರೆಗಳಿದ್ದವು. ಅವುಗಳಲ್ಲಿ 28 ಸಾವಿರ ಕೆರೆ ಮಾತ್ರ ಉಳಿದಿದೆ. 8 ಸಾವಿರ ಕೆರೆಗಳು ದಾಖಲೆಯಿಂದಲೇ ನಾಪತ್ತೆಯಾಗಿವೆ. ಹೀಗಾಗಿ ಕೆರೆಗಳ ಸಂರಕ್ಷಣೆಗಾಗಿ ಪ್ರಾಧಿಕಾರ ರಚನೆ ಮಾಡಲಾಗುವುದು’ ಎಂದರು.