ಶನಿವಾರಸಂತೆ: ಪಟ್ಟಣದ ಕಾವೇರಿ ರಸ್ತೆಯಲ್ಲಿ ಬೆಳೆಗಾರ ಬಿದರೂರು ಕಾಂತರಾಜ್ ಅವರ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಮರದ ಮೇಲೆ 2 ಮರಿಗಳೊಂದಿಗೆ ಚಿರತೆ ಕಾಣಿಸಿಕೊಂಡಿದ್ದು ಭಯದ ವಾತಾವರಣ ಮೂಡಿಸಿದೆ.
ಕಳೆದ ವಾರ ಸಮೀಪದ ಗಡಿಭಾಗದ ದೊಡ್ಡ ಬಿಳಾಹ, ಕಿರಿಬಿಳಾಹ, ಲೆಕ್ಕೆಹನಲು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ ಶನಿವಾರ ಶನಿವಾರಸಂತೆಯಲ್ಲೂ ಕಾಣಿಸಿದೆ.ನಿತ್ಯ ಬೆಳಿಗ್ಗೆ-ಸಂಜೆ ಕಾವೇರಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಪುರುಷರು, ಹೆಚ್ಚಾಗಿ ಮಹಿಳೆಯರಲ್ಲಿ ಆತಂಕ ಮೂಡಿಸಿದೆ.
ಸಮೀಪದ ಗೋಪಾಲಪುರ ಗ್ರಾಮದಲ್ಲೂ ಚಿರತೆಯೊಂದು ನಾಯಿಯನ್ನು ಎಳೆದೊಯ್ದ ಘಟನೆ ನಡೆದಿದೆ. ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ಬಹುತೇಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಎಲ್ಲರೂ ಭಯಭೀತರಾಗಿದ್ದಾರೆ.
ನೆರೆ ಜಿಲ್ಲೆ ಹಾಸನದ ಯಸಳೂರು ಅರಣ್ಯದಲ್ಲಿ ಕೊಡಗಿನ ಗಡಿಗ್ರಾಮ ಲೆಕ್ಕೆಹನಲು ಗ್ರಾಮದ ಸುಬ್ಬಣ್ಣ ಅವರ 2 ಜಾನುವಾರುಗಳನ್ನು ಚಿರತೆ ಬಲಿತೆಗೆದುಕೊಂಡಿತ್ತು.ಕಾಫಿ ತೋಟದಲ್ಲಿ ಕೆಲ ಮಾಡುತ್ತಿದ್ದ ದಂಪತಿ ಮೇಲೆ ಹಾರಿ, ಅವರು ಕೈಯಲ್ಲಿದ್ದ ಕತ್ತಿ, ಗುದ್ದಲಿ ಬೀಸಿದಾಗ ಓಡಿಹೋಗಿತ್ತು.ಇದೀಗ ಚಿರತೆ ಮನುಷ್ಯರ ಬಲಿಗಾಗಿ ಹೊಂಚು ಹಾಕುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.
ವಿಚಾರ ತಿಳಿದ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.