ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಮೆರವಣಿಗೆ ರಾಜಕೀಯ ಬೇಡ

Last Updated 1 ಏಪ್ರಿಲ್ 2018, 20:11 IST
ಅಕ್ಷರ ಗಾತ್ರ

ರಾಮನವಮಿ ಮೆರವಣಿಗೆಯು ಪಶ್ಚಿಮ ಬಂಗಾಳದಲ್ಲಿ ತೀವ್ರತರ ಹಿಂಸಾಚಾರ ಹಾಗೂ ಹಲವರ ಪ್ರಾಣ ಮತ್ತು ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿರುವುದು ವಿಷಾದನೀಯ ಬೆಳವಣಿಗೆ. ಹಿಂಸಾಚಾರ ನಡೆದ ಅಸನ್ಸೋಲ್‌ ಹಾಗೂ ರಾಣಿಗಂಜ್ ಪ್ರದೇಶಗಳಲ್ಲಿ ಈಗಲೂ ಉದ್ವಿಗ್ನತೆ ಶಮನವಾಗಿಲ್ಲ. ಇಂತಹ ಸಂದರ್ಭದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಅಸನ್ಸೋಲ್‌ಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮತ್ತಷ್ಟು ಪ್ರಚೋದನಕಾರಿ ಮಾತುಗಳನ್ನಾಡಿದ್ದು ಅಕ್ಷಮ್ಯ. ನಿಷೇಧಾಜ್ಞೆ ಉಲ್ಲಂಘಿಸಿದ್ದು ಮೊದಲ ಪ್ರಮಾದ. ನಂತರ, ಪ್ರತಿಭಟನಾಕಾರರ ಚರ್ಮವನ್ನು ಜೀವಂತವಾಗಿರುವಾಗಲೇ ಸುಲಿಯುವುದಾಗಿ ಬೆದರಿಕೆ ಒಡ್ಡಿದ ಅವರ ಮಾತು ಸಚಿವ ಹುದ್ದೆಯ ಘನತೆಗೆ ಕಳಂಕ ತರುವಂತಹದ್ದು. ಅಸನ್ಸೋಲ್‌ನ ಸಂಸತ್ ಸದಸ್ಯರಾಗಿ ಹಾಗೂ ಸಚಿವರಾಗಿ ತಾವು ಪ್ರತಿನಿಧಿಸಬೇಕಾದ ಸಾಂವಿಧಾನಿಕ ಮೌಲ್ಯಗಳನ್ನು ಈ ಮಾತಿನ ಮೂಲಕ ಗಾಳಿಗೆ ತೂರಿದ್ದಾರೆ. ಇದು ಅನಪೇಕ್ಷಣೀಯ. ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನಡೆಯನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಜನರ ಪ್ರತಿನಿಧಿಯಾಗಿ, ಜನರ ಆಕ್ರೋಶ ತಣಿಸಬೇಕಾದ ಪ್ರಾಥಮಿಕ ಕರ್ತವ್ಯವನ್ನು ಮರೆತು, ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವಂತಹ ಮಾತುಗಳನ್ನಾಡಿದ್ದಾರೆ ಸಚಿವರು. ಸಮುದಾಯವನ್ನು ವಿಭಜಿಸುವ ಇಂತಹ ವಿದ್ವೇಷದ ಹೇಳಿಕೆಗಳು ವಾತಾವರಣವನ್ನು ಮತ್ತಷ್ಟು ಕದಡುವಂತಹವು.

ಸಾಂಸ್ಕೃತಿಕ ಉತ್ಸವವಾಗಬೇಕಾದ ಮೆರವಣಿಗೆಗಳು ರಾಜಕೀಯ ಉದ್ದೇಶದ ಆಚರಣೆಗಳಾಗಿ ಪರಿವರ್ತಿತವಾಗುವುದು ಸಲ್ಲದು. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ನಾಯಕರೂ ರಾಮನವಮಿ ಮೆರವಣಿಗೆಗಳನ್ನು ನಡೆಸಿದ್ದಾರೆ. ಶಸ್ತ್ರಗಳನ್ನು ಹಿಡಿದು ಮೆರವಣಿಗೆ ನಡೆಸುವುದಾಗಿ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ ಮಾತುಗಳು 
ಪ್ರಚೋದನಾತ್ಮಕವಾಗಿದ್ದವು. ರಾಜಕೀಯ ವಾಗ್ವಾದದ ಗುಣಮಟ್ಟ ಹೆಚ್ಚಾಗಬೇಕು ಎಂಬುದನ್ನು ನಮ್ಮ ರಾಜಕೀಯ ನಾಯಕರು ಅರಿತುಕೊಳ್ಳಬೇಕು. ವಿದ್ವೇಷದ ರಾಜಕಾರಣದಿಂದ ಅಭಿವೃದ್ಧಿ ಸಾಧ್ಯವಾಗದು. ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಾ ಹೋದಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ ಸುಧಾರಿಸುವುದು ಕಷ್ಟ. ಸಹಜವಾಗಿಯೇ ಉದ್ಯೋಗ ಸೃಷ್ಟಿಯೂ ಆಗುವುದಿಲ್ಲ ಎಂಬುದನ್ನು ಪಶ್ಚಿಮ ಬಂಗಾಳದ ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕು.

ಹಿಂಸಾಚಾರ ಹೇಗೆ ಶುರುವಾಯಿತು ಎಂಬ ಬಗ್ಗೆ ವಿಭಿನ್ನ ಹೇಳಿಕೆಗಳಿವೆ. ಆದರೆ ಅಧಿಕೃತ ತನಿಖೆಯ ವಿವರಗಳು ಬರುವವರೆಗೆ ತಾಳ್ಮೆಯಿಂದ ಕಾಯುವುದು ಒಳಿತು. ಈ ಹಿಂಸಾಚಾರಗಳ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಲಿ. ಈ ಮಧ್ಯೆ, ಹದಿಹರೆಯದ ಪುತ್ರನನ್ನು ಕಳೆದುಕೊಂಡ ದುಃಖದ ನಡುವೆಯೂ ಯಾರಾದರೂ ಪ್ರತಿ ದಾಳಿ ನಡೆಸಿದಲ್ಲಿ ಊರು ಬಿಟ್ಟು ಹೋಗುವ ಬೆದರಿಕೆಯನ್ನು ಹಾಕಿ ವಾತಾವರಣ ತಿಳಿಗೊಳಿಸಲು ಅಸನ್ಸೋಲ್‌ನ ಇಮಾಮ್‌ ಯತ್ನಿಸಿರುವುದು ಶ್ಲಾಘನೀಯ. ಪಶ್ಚಿಮ ಬಂಗಾಳ ಮಾತ್ರವಲ್ಲ, ಹಲವು ರಾಜ್ಯಗಳಲ್ಲಿ ಇಂತಹ ಧಾರ್ಮಿಕ ಮೆರವಣಿಗೆಗಳು, ಕೋಮು ಧ್ರುವೀಕರಣಕ್ಕೆ ನೆಪ ಆಗುತ್ತಿರುವುದು ಆತಂಕಕಾರಿ. 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ  ಬಿಜೆಪಿ ವಿರೋಧಿಸುವಂತಹ ಪ್ರತಿಪಕ್ಷಗಳ ಒಕ್ಕೂಟ ರಂಗ (ಫೆಡರಲ್ ಫ್ರಂಟ್) ಸ್ಥಾಪನೆಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಸಭೆಗಳನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲೇ ಅವರ ಸ್ವಂತ ರಾಜ್ಯದಲ್ಲಿ ತನ್ನ ಛಾಪು ಮೂಡಿಸಲು ಬಿಜೆಪಿ ಯತ್ನಿಸುತ್ತಿರುವುದನ್ನು ಮಮತಾ ಬ್ಯಾನರ್ಜಿ ನಿರ್ಲಕ್ಷಿಸಲಾಗದು. ಕೋಮು ಧ್ರುವೀಕರಣದ ರಾಜಕಾರಣ ದೊಡ್ಡ ರೀತಿಯಲ್ಲಿ ಬೆಳೆಯದಂತೆ ಮೊಳಕೆಯಲ್ಲೇ ಚಿವುಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT