ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಾಳೆ (ಸೋಮವಾರ) ನಡೆಯಲಿದೆ.
ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಿಗ್ಗೆ 7 ಕ್ಕೆ ಮತದಾನ ಆರಂಭವಾಗಿ ಸಂಜೆ 6 ರವರೆಗೆ ನಡೆಯಲಿದೆ.
ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲೇ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್ ಹೃದಯಾಘಾತ
ದಿಂದ ನಿಧನರಾಗಿದ್ದರು. ಇದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.
ಬಿಜೆಪಿಯಿಂದ ವಿಜಯಕುಮಾರ್ ಸಹೋದರ ಬಿ.ಎನ್.ಪ್ರಹ್ಲಾದ್ ಬಾಬು ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್ನಿಂದ ಶಾಸಕ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ , ಪಕ್ಷೇತರ ರವಿಕೃಷ್ಣಾ ರೆಡ್ಡಿ ಸೇರಿ 19 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಜೆಡಿಎಸ್ ಈಗಾಗಲೇ ಸೌಮ್ಯಾರೆಡ್ಡಿ ವರಿಗೆ ಬೆಂಬಲ ಸೂಚಿಸಿದೆ. ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಕೊನೆ ಕ್ಷಣದಲ್ಲಿ ಎಂಇಪಿ ಅಭ್ಯರ್ಥಿ ಸೈಯದ್ ಜಬೀ ಅವರೂ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ.
ಬಿ.ಎನ್.ವಿಜಯಕುಮಾರ್ ಕ್ಷೇತ್ರದಲ್ಲಿ ಸರಳ– ಸಜ್ಜನಿಕೆಯಿಂದ ಜನಪ್ರಿಯರಾಗಿದ್ದ ಕಾರಣ ಅವರ ಸಹೋದರ ಪ್ರಹ್ಲಾದ್ಬಾಬುಗೆ ಬಿಜೆಪಿ ಟಿಕೆಟ್ ನೀಡಿದೆ. ಮತದಾರರ ಅನುಕಂಪ ಇರುವುದರಿಂದ ಪ್ರಹ್ಲಾದ್ ಗೆಲುವಿನ ದಡ ಸೇರಬಹುದು ಎಂಬ ಲೆಕ್ಕಾಚಾರ ಪಕ್ಷದ ನಾಯಕರದು. ಆರ್ಎಸ್ಎಸ್ ಕೂಡ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದೆ.
ಪುತ್ರಿ ಸೌಮ್ಯಾರೆಡ್ಡಿ ಗೆಲುವಿಗೆ ರಾಮಲಿಂಗಾರೆಡ್ಡಿ ಎಲ್ಲ ಪ್ರಭಾವವನ್ನೂ ಬಳಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಪಕ್ಷೇತರ ಅಭ್ಯರ್ಥ ರವಿಕೃಷ್ಣಾ ರೆಡ್ಡಿ ಬಿರುಸಿ ಪ್ರಚಾರ ನಡೆಸಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 2,03,184 ಮತದಾರರು ಇದ್ದು, ಇವರಲ್ಲಿ 1,02,668 ಪುರುಷ, 1,00,500 ಮಹಿಳಾ ಮತ್ತು 16 ಮಂದಿ ತೃತೀಯ ಲಿಂಗಿಗಳು ಇದ್ದಾರೆ.
ಚುನಾವಣೆ ಕಾರಣ ಕ್ಷೇತದಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
13 ರಂದು ಮತ ಎಣಿಕೆ
ಇದೇ 13 ರಂದು ಜಯನಗರ ಟಿ.ಬ್ಲಾಕ್ನಲ್ಲಿರುವ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಮತ ಎಣಿಕೆ ಬೆಳಿಗ್ಗೆ 8 ರಿಂದ ಆರಂಭವಾಗಲಿದೆ.