ಬೆಂಗಳೂರು: ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಕಾರು ಚಾಲಕ ಕೆ. ಮಣಿ (38) ಎಂಬುವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನಾ ಸ್ಥಳದಲ್ಲಿ ಮರಣಪತ್ರ ಸಿಕ್ಕಿದೆ.
‘ಸ್ಥಳೀಯ ನಿವಾಸಿ ಆಗಿದ್ದ ಮಣಿ, ಕಾರು ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಲಾಕ್ಡೌನ್ ಆದಾಗಿನಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು’ ಎಂದು ಪೊಲೀಸರು ಹೇಳಿದರು.
‘ರಾಜ್ಯದಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಆದರೆ, ಕೊರೊನಾ ಭೀತಿಯಲ್ಲಿ ಕೆಲಸ ಮಾಡುವುದು ಹೇಗೆ?, ಕುಟುಂಬ ನಿರ್ವಹಣೆ ಹೇಗೆ? ಎಂಬ ಚಿಂತೆ ಮಣಿ ಅವರಿಗೆ ಇತ್ತು. ಜೊತೆಯಲ್ಲಿ ಮನೆಯಲ್ಲಿ ಜಗಳವೂ ನಡೆಯುತ್ತಿತ್ತು. ಇದೇ ವಿಷಯವನ್ನೇ ಅವರು ಮರಣಪತ್ರದಲ್ಲಿ ಬರೆದಿದ್ದಾರೆ’ ಎಂದರು.
‘ಆರ್ಥಿಕ ಸಮಸ್ಯೆಯಿಂದ ಮನೆಯಲ್ಲಿ ತೊಂದರೆ ಉಂಟಾಗಿ ಊಟಕ್ಕೂ ಕಷ್ಟ ಎದುರಾಗಿತ್ತು. ದುಡಿಮೆ ಬಗ್ಗೆ ಮನೆಯಲ್ಲಿ ಜಗಳವೂ ಶುರುವಾಗಿತ್ತು. ಇದೇ ರೀತಿಯಾದರೆ ಮುಂದೆ ಜೀವನ ನಡೆಸುವುದು ಹೇಗೆ? ಎಂಬ ಭಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ನಿಖರ ಮಾಹಿತಿ ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.