ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ನಟಿ ಸುಮಲತಾ ಘೋಷಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
‘ಜೀವನದಲ್ಲಿ ಕೆಲವು ಸವಾಲುಗಳನ್ನು ನಾವು ಹುಡುಕುತ್ತೇವೆ. ಮತ್ತೆ ಕೆಲವು ಸವಾಲುಗಳು ತಾವಾಗೇ ಬರುತ್ತವೆ. ಅಂಬರೀಶ್ ಇಲ್ಲ ಎಂಬ ನೋವು ಇಂದಿಗೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತೀರಿಕೊಂಡಾಗ ಕತ್ತಲೆ ಮನಸ್ಥಿತಿಯಲ್ಲಿದೆ. ಅವರ ಜೊತೆ ಯಾವಾಗಲೂ ಸ್ನೇಹಿತರುಇರುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಮಂಡ್ಯದ ಜನತೆ ಸಮಾಧಾನ ಪಡಿಸಿದರು' ಎಂದು ಹೇಳಿದರು.
ಅಂಬರೀಶ್ ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿಲ್ಲ. ಅಧಿಕಾರದಲ್ಲಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
‘ಯಾರು ಯಾರಿಗೂ ನೋಯಿಸುವ ಮಾತುಗಳನ್ನು ಆಡಬಾರದು. ಜತೆಗೆ, ವೈಯಕ್ತಿಕ ನಿಂದನೆ ಮಾಡಬಾರದು. ಚಿತ್ರರಂಗದಲ್ಲಿ ಒಗ್ಗಟ್ಟು ಇದೆ. ಅದೇ ರೀತಿ ರಾಜಕಾರಣದಲ್ಲಿ ವೈರಿ ಅಗುವುದು ಬೇಡ’ ಎಂದು ತಿಳಿಸಿದರು.
‘ಚುನಾವಣೆ ಎದುರಿಸಲು ಧೈರ್ಯ ಬೇಕು. ಇದು ಕಷ್ಟದ ಹಾದಿ ಎಂಬುದು ಗೊತ್ತಿದೆ. ಅಂಬರೀಶ್ಅಭಿಮಾನಿಗಳ ಪ್ರೀತಿಗೆ ಮಣಿದು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ನನ್ನನಿರ್ಧಾರದಿಂದ ಹಲವು ಸಂಬಂಧಿಕರು ದೂರವಾಗುತ್ತಾರೆ. ಆದರೂ ಕೂಡ ನನ್ನ ನಿರ್ಧಾರ ಪ್ರಕಟಿಸಲು ಇದು ಸೂಕ್ತ ಸಮಯ. ಮಂಡ್ಯದ ಜನತೆ ಸದಾನನ್ನ ಜೊತೆಗಿರುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು.
ಇದೇ 20ರಂದು (ಬುಧವಾರ) ಬೆಳಗ್ಗೆ 10 ಗಂಟೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.
ಸುಮಲತಾಗೆ ಚಿತ್ರರಂಗದ ನಟರಾದ ಯಶ್, ದರ್ಶನ್, ಅಭಿಷೇಕ್, ದೊಡ್ಡಣ್ಣ, ಜೈಜಗದೀಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ಗಣ್ಯರು ಸಾಥ್ ನೀಡಿದ್ದರು.