ಮಂಗಳೂರು: ಮಗಳಿಗಾಗಿ ಸುರಕ್ಷಿತವಾದ ಸ್ವಂತ ಸೂರೊಂದನ್ನು ಹೊಂದುವ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ (ವಿಧವೆ) ಒಬ್ಬರ ಕನಸನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ನನಸು ಮಾಡಿದ್ದಾರೆ. ಅವರ ಮಧ್ಯಪ್ರವೇಶದಿಂದಾಗಿ ಮಹಿಳೆಯ ಏಳು ವರ್ಷಗಳ ದೀರ್ಘ ಹೋರಾಟಕ್ಕೆ ತೆರೆಬಿದ್ದಿದೆ.
ಉರ್ವ ಸ್ಟೋರ್ನಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್ಇ) ಎಸ್ಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಮಹಿಳೆಯ ಪತಿ ಕೂಡ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಯಲ್ಲಿದ್ದರು. ಮಲೇರಿಯಾ ರೋಗದಿಂದ ಅವರು ಮೃತಪಟ್ಟಿದ್ದರು. ಆ ಬಳಿಕ ಮಹಿಳೆಯ ಬದುಕು ಸಂಕಷ್ಟಕ್ಕೆ ಸಿಲುಕಿತ್ತು.
ಅಂತರಧರ್ಮೀಯ ವಿವಾಹವಾಗಿದ್ದ ಮಹಿಳೆಗೆ ಪತಿಯ ನಿಧನದ ಬಳಿಕ ನಿರಂತರ ಸಮಸ್ಯೆಗಳು ಎದುರಾಗಿದ್ದವು. ಮೂರನೇ ತರಗತಿಯಲ್ಲಿ ಓದುತ್ತಿರುವ ಮಗಳ ರಕ್ಷಣೆಗಾಗಿ ಸ್ವಂತ ಸೂರೊಂದನ್ನು ಹೊಂದಲು ಬಯಸಿದ್ದ ಅವರು, ಯು.ಶ್ರೀನಿವಾಸ ಮಲ್ಯ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡುವಂತೆ ಕೋರಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಅರ್ಜಿ ಸಲ್ಲಿಸಿದ್ದರು.
‘ನಿವೇಶನ ಮಂಜೂರು ಮಾಡುವಂತೆ ಕೋರಿ ನಾನು ಸಲ್ಲಿಸಿದ್ದ ಅರ್ಜಿಯನ್ನು ಮುಡಾ ಮಾನ್ಯ ಮಾಡಿತ್ತು. ಆದರೆ, ಮೈಸೂರು ವಿಭಾಗೀಯ ಆಯುಕ್ತರು ನನ್ನ ಮನವಿಯನ್ನು ತಿರಸ್ಕರಿಸಿದರು. ಅಂತರಧರ್ಮೀಯ ವಿವಾಹವಾಗಿರುವ ಕಾರಣಕ್ಕಾಗಿ ಸಂಬಂಧಿಕರು ನೆರವಿಗೆ ಬರಲಿಲ್ಲ. ಮೈಸೂರು ವಿಭಾಗೀಯ ಆಯುಕ್ತರ ಕಚೇರಿ, ವಿಧಾನಸೌಧಕ್ಕೆ ಹೋಗಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಸಲ್ಲಿಸಿದ ಅರ್ಜಿಗಳ ಸಂಖ್ಯೆಯೇ ನನಗೆ ಮರೆತುಹೋಗಿದೆ’ ಎಂದು ಗುರುತು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಈ ಮಹಿಳೆ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.