ಬೆಂಗಳೂರು:ರಾಜ್ಯದಾದ್ಯಂತ ಎಲ್ಪಿಜಿ ಅಡುಗೆ ಅನಿಲ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಡುಗೆ ಅನಿಲ ಸಿಲಿಂಡರ್ಗಳ ಸಾಕಷ್ಟು ದಾಸ್ತಾನಿದ್ದು, ಸಾರ್ವಜನಿಕರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಎಂದು ಸರ್ಕಾರಿ ತೈಲ ಕಂಪನಿಗಳು ಅಭಯ ನೀಡಿವೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಸಿ ಮತ್ತು ಎಚ್ಪಿಸಿಗಳು ಅಡುಗೆ ಅನಿಲ ಸಿಲಿಂಡರ್ಗಳ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಂಡಿವೆ. ಯಾವುದೇ ತುರ್ತು ಸಂದರ್ಭದಲ್ಲಿಯೂ, ಈ ಸಿಲಿಂಡರ್ಗಳ ಪೂರೈಕೆಗೆ ತೊಂದರೆಯಾಗುವುದಿಲ್ಲ ಎಂದು ಅವರು ಖಾತ್ರಿ ನೀಡಿವೆ.
ರಾಜ್ಯ ಸರ್ಕಾರ ಕೂಡ ಎಲ್ಪಿಜಿ ಮರುಪೂರಣ ಮಾಡಿ ವಿತರಣೆ ಮಾಡುವುದಕ್ಕೆ ವಿಶೇಷ ಅವಕಾಶ ಕಲ್ಪಿಸಿದೆ. ಇದನ್ನು ಅವಶ್ಯಕ ವಸ್ತು ಎಂದು ಪರಿಗಣಿಸಲಾಗಿದೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.
‘ಎಲ್ಲರೂ ಏಕಕಾಲಕ್ಕೆ ಮುಂಗಡ ಕಾಯ್ದಿರಿಸಿದರೆ ಕಷ್ಟವಾಗುತ್ತದೆ. ಪರಿಸ್ಥಿತಿ ಹೀಗಾದಲ್ಲಿ, ಯಾರಿಗೆ ತೀರಾ ಅಗತ್ಯವಿರುತ್ತದೆಯೋ ಅವರಿಗೆ ಸಿಗದಿರಬಹುದು. ಹಾಗಾಗಿ, ಗ್ರಾಹಕರು ಆತಂಕಕ್ಕೀಡಾಗಿ ಅಗತ್ಯವಿಲ್ಲದೆ, ಯಾರೂ ಮುಂಗಡವಾಗಿ ಕಾಯ್ದಿರಿಸಬಾರದು’ ಎಂದು ಕಂಪನಿಗಳು ಮನವಿ ಮಾಡಿವೆ.
‘ಎಲ್ಪಿಜಿ ಸಿಲಿಂಡರ್ ಪೂರೈಸಲಾಗುತ್ತಿದೆ. ಮೊದಲು ನಾಲ್ಕೈದು ದಿನಗಳಾಗುತ್ತಿದ್ದವು. ಈಗ ಬುಕ್ ಮಾಡಿದ ಮರುದಿನವೇ ಸಿಲಿಂಡರ್ ನೀಡಿದರು’ ಎಂದು ಆರ್.ಟಿ. ನಗರದ ಯಶೋದಾ ಎಂಬುವರು ತಿಳಿಸಿದರು.