ವಿಜಯಪುರ: ಮುಂಬರುವ ಲೋಕಸಭಾ ಚುನಾವಣೆಯ ಬಳಿಕ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಶನಿವಾರ ಇಲ್ಲಿ ತಿಳಿಸಿದರು.
‘ಈಗ ಹೋರಾಟಕ್ಕಿಳಿದರೆ ಅಪಪ್ರಚಾರ ನಡೆಯಲಿದೆ. ಲೋಕಸಭಾ ಚುನಾವಣೆ ಬಳಿಕ ಮೈದಾನ ಖುಲ್ಲಾ ಇರಲಿದ್ದು, ಆಗ ಹೋರಾಟಕ್ಕೆ ತೀವ್ರ ಸ್ವರೂಪ ನೀಡಲಾಗುವುದು’ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಗದಗ ಮತ್ತು ಚಾಮರಾಜನಗರದಲ್ಲಿ ಸಿದ್ದರಾಮಯ್ಯ ನೀಡಿದ ಹೇಳಿಕೆಗಳನ್ನು ಕೆಲವರ ಕಪಿಮುಷ್ಟಿಯಲ್ಲಿರುವ ಮಾಧ್ಯಮಗಳು ತಿರುಚಿವೆ. ಹೋರಾಟದಿಂದ ಹಿನ್ನಡೆಯಾಯ್ತು ಎಂದು ಎಲ್ಲಿಯೂ ಅವರು ಹೇಳಿಲ್ಲ’ ಎಂದು ಎಂ.ಬಿ.ಪಾಟೀಲ ಇದೇ ಸಂದರ್ಭ ಸ್ಪಷ್ಟಪಡಿಸಿದರು.
‘ಇದೇ 22ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸರಿಪಡಿಸುವರು ಎಂಬ ವಿಶ್ವಾಸವಿದೆ’ ಎಂದು ಹೇಳಿದರು.