ಚಾಮರಾಜನಗರ: ವಿಧಾನಸಭಾ ಚುನಾವಣೆ ನಂತರ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ ಶುಕ್ರವಾರ ಇಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಂಡರು.
ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿದ ಮಹದೇವಪ್ಪ, ‘ನಾನು, ಸಿ.ಎಂ.ಇಬ್ರಾಹಿಂ, ಸಿದ್ದರಾಮಯ್ಯ, ಜಾರಕಿಹೊಳಿ ಬೇರ್ಪಟ್ಟಿಲ್ಲ. ಇನ್ನೂ ಒಗ್ಗಟ್ಟಾಗಿದ್ದೇವೆ. ಸಿದ್ಧಾಂತಕ್ಕಾಗಿ ಹೋರಾಟ ಮಾಡಿದವರು. ಅಧಿಕಾರಕ್ಕಾಗಿ ಅಲ್ಲ’ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಷಣಕ್ಕೆ ತೆರಳಿದಾಗ ಅವರ ಆಸನದಲ್ಲಿ ಕುಳಿತು, ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು. ವಿಧಾನಸಭೆ ಚುನಾವಣೆ ಬಳಿಕ ಸಂಸದ ಆರ್.ಧ್ರುವನಾರಾಯಣ ಅವರಿಂದಲೂ ಅಂತರ ಕಾಯ್ದಕೊಂಡಿದ್ದ ಮಹದೇವಪ್ಪ, ‘ಗುಣಕ್ಕೆ ಮತ್ಸರವಿಲ್ಲ’ ಎಂಬ ಮಾತನ್ನು ಉದ್ಧರಿಸಿ, ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ರಾಜ್ಯದಲ್ಲಿ ಸ್ಪರ್ಧೆ: ರಾಹುಲ್ಗೆ ಆಹ್ವಾನ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಿಂದಲೂ ಸ್ಪರ್ಧಿಸಬೇಕು ಎಂದು ಆಹ್ವಾನ ನೀಡಲು ರಾಜ್ಯ ಕಾಂಗ್ರೆಸ್ ಬಯಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
‘ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ಉತ್ತರ ಪ್ರದೇಶದಿಂದ ಸ್ಪರ್ಧಿಸುತ್ತಿದ್ದಾರೆ. ನಮ್ಮಲ್ಲೂ ಸ್ಪರ್ಧೆ ಮಾಡಬೇಕು ಎಂಬುದು ನಮ್ಮ ಆಸೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ಗೆ ಶಕ್ತಿ ಕೊಟ್ಟ ರಾಜ್ಯ. ಹಾಗಾಗಿ ಅವರು ಇಲ್ಲಿ ಸ್ಪರ್ಧಿಸಲಿ’ ಎಂದರು.