ಬೆಂಗಳೂರು: ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಭಾನುವಾರ ಆರೋಪಿಸಿದರು.
‘ನಾನು ಮುಖ್ಯಮಂತ್ರಿ ರೇಸ್ನಲ್ಲಿ ಇಲ್ಲ. ಅಂತಹ ಯಾವುದೇ ಪ್ರಯತ್ನವನ್ನೂ ನಡೆಸಿಲ್ಲ. ಮುಂದೆ ಏನಾಗುತ್ತದೊ ನೋಡೋಣ’ ಎಂದು ಹೇಳಿದರು.
ಅರುಣಾಚಲ ಪ್ರದೇಶದಿಂದ ತೆಲಂಗಾಣದವರೆಗೆ ವಿವಿಧ ರಾಜ್ಯಗಳಲ್ಲಿ ಒಡೆದು ಆಳುವ ನೀತಿಯನ್ನು ಬಿಜೆಪಿ ಮಾಡುತ್ತಿದ್ದು, ಪ್ರಜಾಪ್ರಭುತ್ವದಉಳಿವು ಕಷ್ಟಕರವಾಗಿದೆ. ಆ ಪಕ್ಷದ ಕೇಂದ್ರ ನಾಯಕರ ಕೈವಾಡ ಇಲ್ಲ ಎನ್ನುವುದಾದರೆ ರಾಜೀನಾಮೆ ನೀಡಿದ ನಂತರ ಶಾಸಕರು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ಹೇಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು.
ಇದೇ 12ರಂದು ವಿಧಾನಸಭೆ ಅಧಿವೇಶನ ನಡೆಯಲಿದ್ದು, ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗುತ್ತದೆ. ಅಂದು ಎಷ್ಟು ಮಂದಿ ವಿಪ್ ಪಾಲನೆ ಮಾಡಲಿದ್ದಾರೆ ಎಂಬುದರ ಮೇಲೆ ಮೈತ್ರಿ ಸರ್ಕಾರದ ಉಳಿವು ನಿರ್ಧಾರವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಚುನಾಯಿತ ಸರ್ಕಾರ ಬೀಳಿಸುವ ಪ್ರಯತ್ನವನ್ನು ಬಿಜೆಪಿ ಸದಾ ಮಾಡುತ್ತಲೇ ಬಂದಿದ್ದು, ಶಾಸಕರನ್ನು ಹೆದರಿಸಿ, ಬೆದರಿಸುವ ಕೆಲಸ ಮಾಡುತ್ತಿದೆ. ಸಾಕಷ್ಟು ವರ್ಷಗಳಿಂದ ಪಕ್ಷಗಳಲ್ಲಿ ಇದ್ದವರೂ ರಾಜೀನಾಮೆ ನೀಡಿದ್ದು, ಅಂತಹಶಾಸಕರ ಮನವೊಲಿಸಿ, ವಾಪಸ್ ಕರೆತರುವುದು ಕಷ್ಟಕರ ಎನಿಸುತ್ತದೆ ಎಂದರು.