ಬೆಂಗಳೂರು: ಪೆಟ್ರೋಲ್ ಬಂಕ್ ವ್ಯವಸ್ಥಾಪಕರೊಬ್ಬರ ಮುಖಕ್ಕೆ ‘ಪೆಪ್ಪರ್ ಸ್ಪ್ರೇ’ ಮಾಡಿ ₹19.81 ಲಕ್ಷ ಸುಲಿಗೆ ಮಾಡಿದ್ದ ಆರೋಪದಡಿ ಬಾಲಕ ಸೇರಿ 7 ಮಂದಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ವೃಷಭಾವತಿನಗರದ ಸಾಗರ್ (24), ಸಂಜಯ್ (22), ಚುಂಚನಕಟ್ಟೆ ಮುಖ್ಯ ರಸ್ತೆಯ ದಿವಾಕರ್ ರಾಜ್ ಅರಸ್ (25), ಚಿಕ್ಕಲ್ಲಸಂದ್ರದ ಪುರುಷೋತ್ತಮ (25), ಕತ್ರಿಗುಪ್ಪೆ ವಾಟರ್ ಟ್ಯಾಂಕ್ನ ಸಂತೋಷ್ ಕುಮಾರ್ (25), ಶ್ರೀನಗರದ ಆರ್.ನವೀನ್ ಗೌಡ (20) ಬಂಧಿತರು.
ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಟೌನ್ಶಿಪ್ನಲ್ಲಿರುವ ಬಿ.ಪಿ.ಸಿ.ಎಲ್ ಬಂಕ್ನ ವ್ಯವಸ್ಥಾಪಕ ಪಿ.ಸಿ.ಸ್ವಾಮಿ, ಹಣ ಜಮೆ ಮಾಡುವ ಉದ್ದೇಶದಿಂದ ಫೆ. 19ರಂದು ಬೆಳಿಗ್ಗೆ 10.15 ಗಂಟೆಗೆ ಬ್ಯಾಂಕ್ಗೆ ಹೊರಟಿದ್ದರು. ಅವರ ಬೈಕ್ ಹಿಂಬಾಲಿಸಿಕೊಂಡು ಹೋಗಿದ್ದ ಆರೋಪಿಗಳು, ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದರು. ನಂತರ, ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಮಾರಕಾಸ್ತ್ರಗಳನ್ನು ತೋರಿಸಿ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.
ಆರೋಪಿಗಳನ್ನು ಬಂಧಿಸಿದಪೊಲೀಸರು, ಅವರಿಂದ ₹7.52 ಲಕ್ಷ ನಗದು, ಸುಲಿಗೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಚಿನ್ನದ ಉಂಗುರ, ಮಾರಕಾಸ್ತ್ರ, ಕಾರು ಹಾಗೂ ನಾಲ್ಕು ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
‘ಬಂಧಿತರು ಈ ಹಿಂದೆಯೂ ಅಪಹರಣ, ಕೊಲೆ, ಕೊಲೆ ಯತ್ನ ಹಾಗೂ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.