ಉಜಿರೆ: ‘ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ ಹಾಗೂ ಸಿದ್ಧನಾಗಿದ್ದೇನೆ. ಅವರೇ ನನಗೆ ಸ್ಫೂರ್ತಿ. ಅವರು ನನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸೋಮವಾರ ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.
‘ಚುನಾವಣೆಯಲ್ಲಿ ಗೆದ್ದು ನನ್ನ ಕೊನೆ ಉಸಿರು ಇರುವವರೆಗೂ ಮಂಡ್ಯದ ಜನರ ಸೇವೆ ಮಾಡಿ, ಅವರ ಋಣ ತೀರಿಸುತ್ತೇನೆ. ಚುನಾವಣೆಯಲ್ಲಿ ನನಗೆ ಗೆಲುವು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುಮಲತಾ ಅಂಬರೀಷ್ ಸ್ಪರ್ಧೆ ಬಗ್ಗೆ ಪ್ರಸ್ತಾಪಿಸಿದಾಗ, ‘ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
‘ಶಿವ ನಮ್ಮ ಮನೆ ದೇವರು. ಪ್ರತಿ ವರ್ಷ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಹೆಗ್ಗಡೆಯವರ ಆಶೀರ್ವಾದ ಪಡೆಯುತ್ತೇನೆ. ಸೋಮವಾರ ಹಾಗೂ ಶಿವರಾತ್ರಿ ಸಂದರ್ಭವಾದುದರಿಂದ ದೇವರ ದರ್ಶನ ಮಾಡಿ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತಾಗಲಿ’ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ನಿಖಿಲ್ ಹೇಳಿದರು.