ಮಂಡ್ಯ: ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಅಂತ್ಯ ಸಂಸ್ಕಾರ ಶನಿವಾರ ನೆರವೇರಿತು. ಇಲ್ಲಿನಭಾರತೀನಗರ ಸಮೀಪದ ಮೆಳ್ಳಹಳ್ಳಿಯ ಹೆಬ್ಬಾಳ ಬಳಿಯಿರುವ 10ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯ ಕ್ರಿಯೆ ನಡೆಯಿತು.
ಸಕಲ ಸರ್ಕಾರಿ ಗೌರವಗಳನ್ನು ಸಮರ್ಪಿಸಿದ ಬಳಿಕ ಹುತಾತ್ಮ ಗುರು ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ನೆರದಿದ್ದ ಅನೇಕರು ಕೈಮುಗಿದು ಕಣ್ಣೀರಾದರು. ಹುತಾತ್ಮನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
ಅಗ್ನಿ ಸ್ಪರ್ಶಕ್ಕೂ ಮುನ್ನ ಹುತಾತ್ಮ ಯೋಧನ ಪತ್ನಿ ಕಲಾವತಿ ಪಾರ್ಥಿವ ಶರೀರದೆದುರು ನಿಂತು ಸೆಲ್ಯೂಟ್ ಮಾಡಿ ಅಂತಿಮ ಗೌರವ ಸಲ್ಲಿಸಿದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಹೆಚ್. ಗುರು ಅವರ ಸ್ವಗ್ರಾಮ ಗುಡಿಗೆರೆಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.