ವಿಜಯಪುರ: ಬಡವ, ಶ್ರೀಮಂತ, ನಗರ, ಗ್ರಾಮೀಣ, ವಿದ್ಯಾರ್ಹತೆ, ಆದಾಯದಂತಹ ವಿಷಯಗಳನ್ನು ಬದಿಗೊತ್ತಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಪ್ರತಿಯೊಬ್ಬ ಮತದಾರ ತಮ್ಮ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ ಎಂ.ಸುಂದರೇಶ ಬಾಬು ಹೇಳಿದರು.
ನಗರದ ಜಿಲ್ಲಾ ಪಂಚಾಯ್ತಿಯಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನದ ಅರಿವು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಪ್ರಮಾಣ ಹೆಚ್ಚಿಸಲು ಪ್ರತಿ ಗ್ರಾಮ ಹಾಗೂ ಮತಗಟ್ಟೆ ಮಟ್ಟದಲ್ಲಿ ಮತದಾನ ಜಾಗೃತಿ ಗುಂಪುಗಳ ಮೂಲಕ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
18 ವರ್ಷದೊಳಗಿನ ಪ್ರತಿಯೊಬ್ಬ ನಾಗರಿಕ ಮತದಾನ ಮಾಡಬೇಕೆಂಬ ಪ್ರೋತ್ಸಾಹ ನೀಡುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಪ್ರತಿಯೊಬ್ಬರು ಚುನಾವಣಾ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳ ಬೇಕು. ಯಾವುದೇ ಆಮಿಷ ಗಳಿಗೆ ಒಳಗಾಗದೇ ಅಮೂಲ್ಯವಾದ ಹಕ್ಕು ಚಲಾಯಿಸಬೇಕು ಎಂದರು.
‘ಪ್ರಥಮ ಬಾರಿಗೆ ಇವಿಎಂ ಜೊತೆಗೆ ಮತ ಖಾತ್ರಿ ಯಂತ್ರ ಬಳಸಲಾಗುತ್ತಿದ್ದು, ಈ ಕುರಿತು ಜನಾಂಗಕ್ಕೆ ನೀಡಲಾಗಿರುವ ಭಿತ್ತಿಪತ್ರದಲ್ಲಿ ಮಾಹಿತಿ ಒದಗಿಸಲಾಗಿದೆ’ ಎಂದು ತಿಳಿಸಿದರು.
ಕಳೆದ 70 ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಸಮುದಾಯವನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಒಂದೆಡೆ ಸೇರಿಸಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮಿತಿ ಸದಸ್ಯರಾದ ಎಸ್.ಆರ್.ವಿಭೂತಿ, ಭೀಮಾಶಂಕರ ಉದಂಡಿ, ವಿಲಾಸರಾವ ಸಿಂಧೆ ಸಂತಸ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಸಿ.ವಿ.ದಶವಂತ, ಯೋಜನಾ ನಿರ್ದೇಶಕ ಕುಂಬಾರ, ಪ್ರಕಾಶ ಸಾಲಿಮನಿ ಉಪಸ್ಥಿತರಿದ್ದರು.