ನವದೆಹಲಿ: ಸಂಧಾನದ ಮೂಲಕ ವಿಚ್ಛೇದನ ಪಡೆದಿರುವ ಮಹಿಳೆಯು ಈ ಮೊದಲೇ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ದಾಖಲಿಸಿರುವ ಅಪರಾಧ ಪ್ರಕರಣಗಳನ್ನು ನ್ಯಾಯಾಲಯ ವಿಲೇವಾರಿ ಮಾಡಬಹುದೇ ಎಂಬುದನ್ನು ಪರಾಮರ್ಶಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಗಡಿ ಭದ್ರತಾ ಪಡೆ (ಬಿಎಸ್ಎಫ್)ಯಲ್ಲಿ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ಮೂಲದ ಯೋಧ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ನೇತೃತ್ವದ ಪೀಠ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಐಪಿಸಿ ಸೆಕ್ಷನ್ 498 ‘ಎ’ ಅಡಿ ದಾಖಲಾದ ಪ್ರಕರಣವನ್ನು ರಾಜಿ ಮೂಲಕ ಪರೋಕ್ಷವಾಗಿ ರದ್ದುಗೊಳಿಸಲು ಅನುಮತಿ ನೀಡಲಾಗದು ಎಂದು ರಾಜ್ಯ ಹೈಕೋರ್ಟ್ 2018ರ ಫೆಬ್ರುವರಿ 17ರಂದು ನೀಡಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ನ್ಯಾಯಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ವೈವಾಹಿಕ ವಿವಾದ ಕುರಿತ ಪ್ರಕರಣ ಖಾಸಗಿ ಸ್ವರೂಪದ್ದಾಗಿದೆ. ರಾಜಿ ಮೂಲಕ ವಿವಾದ ಬಗೆಹರಿಸಿ ಕೊಂಡು ವಿಚ್ಛೇದನ ಪಡೆದಿರುವುದರಿಂದ ಹೈಕೋರ್ಟ್ ಅಪರಾಧ ಪ್ರಕರಣ ರದ್ದುಗೊಳಿಸಬಹುದಾಗಿತ್ತು ಎಂದು ಅರ್ಜಿದಾರರ ಪರ ವಕೀಲ ಸಂಜಯ್ ನುಲಿ ವಾದಿಸಿದರು.
ಅರ್ಜಿದಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅಪರಾಧ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲಾಗದು ಎಂದು ಅವರು ವಿವರಿಸಿದರು. ಪ್ರಕರಣ ಸಂಬಂಧ ದೂರುದಾರ ಮಹಿಳೆಯಿಂದಲೂ ನ್ಯಾಯಪೀಠ ಪ್ರತಿಕ್ರಿಯೆ ಕೋರಿತು.