ಬೀದರ್: ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಪ್ರಯುಕ್ತ ಹರಕೆ ತೀರಿಸಲು ಮಹಾರಾಷ್ಟ್ರದ ತುಳಜಾಪುರದಲ್ಲಿರುವ ತುಳಜಾಭವಾನಿ ದರ್ಶನ ಪಡೆಯಲು ಭಾನುವಾರ ಸೈಕಲ್ ಯಾತ್ರೆ ಆರಂಭಿಸಿದರು.
ಸಚಿವರು ಬೆಳಿಗ್ಗೆ ರಾಮಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹೊಸ ಸೈಕಲ್ ಏರಿ ಯಾತ್ರೆ ಶುರು ಮಾಡಿದರು. ಕುಟುಂಬದ ಸದಸ್ಯರು ಬಂಡೆಪ್ಪ ಅವರ ಹಣೆಗೆ ಕುಂಕುಮ ತಿಲಕವಿಟ್ಟು, ಆರತಿ ಬೆಳಗಿದರು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಗುಲಾಬಿ ಮಾಲೆಗಳನ್ನು ಹಾಕಿ ಶುಭ ಕೋರಿದರು.
2004 ಹಾಗೂ 2008ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಸಂದರ್ಭದಲ್ಲಿ ಸೈಕಲ್ ಮೇಲೆ ತುಳಜಾಪುರಕ್ಕೆ ತೆರಳಿದ್ದರು. 2018ರ ಚುನಾವಣೆಯಲ್ಲೂ ಜಯ ಸಾಧಿಸಿದ್ದರಿಂದ ಮೂರನೇ ಬಾರಿಗೆ ತುಳಜಾಪುರಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.