ಬೈಲಹೊಂಗಲ: ಬ್ರಾಹ್ಮಣರ ಅವಹೇಳನ ಖಂಡಿಸಿ ತಾಲ್ಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಮುರಗೋಡದ ಬ್ರಾಹ್ಮಣ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಶೀಲ್ದಾರ್ಗೆ ಗುರುವಾರ ಮನವಿ ಸಲ್ಲಿಸಿದರು.
ಗ್ರಾಮದ ಹಳೆಯ ಬಸ್ ನಿಲ್ದಾಣ ಸಮೀಪದ ಹನಮಂತ ದೇವರ ದೇವಸ್ಥಾನದಿಂದ ತೆರಳಿ ಜಂಗವಾಡ ಕ್ರಾಸ್ ಬಳಿ ಸೇರಿ ಮಾನವ ಸರಪಳಿ ನಿರ್ಮಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ಡಿ.ಎ.ಕುಲಕರ್ಣಿ ಮಾತನಾಡಿ, ‘ಬ್ರಾಹ್ಮಣ ಸಮಾಜ ಶಾಂತಿಪ್ರಿಯ ಸಮಾಜವಾಗಿದೆ. ಯಾವ ಸಮಾಜಕ್ಕೂ ನೋವು ಉಂಟು ಮಾಡದೆ
ಎಲ್ಲರೊಂದಿಗೆ ಸಹಕಾರದಿಂದ ಜೀವನ ಸಾಗಿಸುತ್ತಿದ್ದೇವೆ. ಅಂತಹ ಸಮಾಜದವರನ್ನು ನಿಂದಿಸಿ ನೋವು ಉಂಟು ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
ಮುಖಂಡರಾದ ಅಶೋಕರಾವ್ ದೇಶಪಾಂಡೆ, ಪಂಡರೀನಾಥ ಜೋಶಿ, ರಮೇಶ ದೇಶಪಾಂಡೆ ಮಾತನಾಡಿದರು. ಪ್ರತಿಭಟನಾಕಾರರು ಉಪತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದಾಗ ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪಿಎಸ್ಐ ಪ್ರಸಾದ ಫಣೇಕರ ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದರು. ಕಂದಾಯ ನಿರೀಕ್ಷಕ ಆರ್.ಎಸ್.ಹೂಲಿ ಮನವಿ ಪಡೆದರು.