ಮುದಗಲ್(ರಾಯಚೂರು): ‘ರಾಜ್ಯದಲ್ಲಿ ವರದಿಗಾರರು ಸತ್ಯಾಂಶವನ್ನು ವರದಿ ಮಾಡಿದರೆ, ಸುಳ್ಳು ಪ್ರಕರಣ ದಾಖಲಿಸುತ್ತಿರುವ ವಿಷಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬರ ಅಧ್ಯಯನ ಸಂಬಂಧವಾಗಿ ಸಮೀಪದ ರಾಮಜೀ ನಾಯಕ ತಾಂಡಾಗೆ ಶನಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಾಧ್ಯಮದವರ ಜತೆ ಬಿಜೆಪಿ ಇದೆ. ನಿರ್ಭಯವಾಗಿ ವರದಿ ಮಾಡಿ.ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ರಾಜ್ಯದಲ್ಲಿ ಗಂಭೀರ ಬರಗಾಲ ಇದ್ದರೂ, ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನರು ತೀವ್ರ ತೊಂದರೆ ಅನುಭವಿಸುವುದು ಕಾಣುತ್ತಿಲ್ಲ. ಸಾಲಮನ್ನಾ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಹರಿಹಾಯ್ದರು.
‘ಅಧಿಕಾರಿಗಳು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಜನರ ಸಮಸ್ಯೆ ಕೇಳುವರು ಯಾರು ಇಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಂಡು ಉತ್ತರ ನೀಡಿದರೆ ಕಪಾಳಮೋಕ್ಷ ಮಾಡುತ್ತೇನೆ’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆನಂತರ ಲಿಂಗಸುಗೂರು ಪಟ್ಟಣಕ್ಕೆ ಭೇಟಿ ನೀಡಿದರು. ‘ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡುತ್ತೇನೆ’ ಎಂದು ಹೇಳಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.