ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆ ಕೊನೆ ಹಂತಕ್ಕೆ ಬಂದಿದ್ದು, ಕೇಂದ್ರ ಸರ್ಕಾರ ಪ್ರಕಟಿಸಿದ ಮೇಲ್ವರ್ಗದಲ್ಲಿನ ಅರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್) ಮೀಸಲಾತಿ ಸೌಲಭ್ಯ ಇಲ್ಲದೆ ಅದು ಕೊನೆಗೊಳ್ಳುತ್ತಿದೆ.
ಒಂದು ವೇಳೆ ರಾಜ್ಯ ಸರ್ಕಾರ ಈ ಮೀಸಲಾತಿ ಜಾರಿಗೊಳಿಸಿದ್ದರೆ ಸುಮಾರು 600ರಷ್ಟು ವೈದ್ಯಕೀಯ ಸೀಟುಗಳು ಹಾಗೂ 200ರಷ್ಟು ದಂತ ವೈದ್ಯ ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗುತ್ತಿದ್ದವು. ಆದರೆ ಅದು ಸಾಧ್ಯವಾಗಿಲ್ಲ.ಹೀಗಾಗಿ 6,620 ವೈದ್ಯಕೀಯ ಮತ್ತು 2,674 ದಂತ ವೈದ್ಯಕೀಯ ಸೀಟುಗಳ ಭರ್ತಿಯಷ್ಟೇ ಆಗುತ್ತಿದೆ.
‘ಇಡಬ್ಲ್ಯುಎಸ್ ವರ್ಗಗಳಿಗೆ ಯಾವ ಪ್ರಮಾಣದಲ್ಲಿ ಮೀಸಲಾತಿ ಹಂಚಿಕೆ ಮಾಡಬೇಕು ಎಂಬ ಗೊಂದಲದಿಂದ ಸರ್ಕಾರ ಹೊರಬಂದಿಲ್ಲ. ಮುಂದಿನ ವರ್ಷ ಇದು ಬಗೆಹರಿಯುವ ನಿರೀಕ್ಷೆ ಇದೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಹೆಚ್ಚುವರಿ ಸೀಟು ಲಭ್ಯ ಇದ್ದರೂ ಅದನ್ನು ಭರ್ತಿ ಮಾಡದೆ ಹೋಗಿದ್ದರೆ ರಾಜ್ಯಕ್ಕೆ ಆದ ಭಾರಿ ನಷ್ಟ ಎನ್ನಬಹುದಿತ್ತು. ಆದರೆ ಮೀಸಲಾತಿಯನ್ನೇ ಪ್ರಕಟಿಸದ ಕಾರಣ ಹೆಚ್ಚುವರಿ ಸೀಟು ಲಭಿಸಿಲ್ಲ ಅಷ್ಟೇ. ನೀಟ್ ಫಲಿತಾಂಶ ಬಂದಾಗಲೇ ಈ ವಿಷಯ ಗೊತ್ತಿದ್ದರಿಂದ ವಿದ್ಯಾರ್ಥಿಗಳಿಗೂ ಅಂತಹ ನಿರೀಕ್ಷೆ ಇರಲಿಲ್ಲ’ ಎಂದೂ ಅವರು ತಿಳಿಸಿದರು.