ಮೈಸೂರು: ತಮಿಳುನಾಡಿಗೆ ನಾಲ್ಕು ಟಿಎಂಸಿ ಅಡಿ ನೀರು ಬಿಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು
‘ಯಾರದ್ದೋ ಮೇಲಿನ ಕೋಪವನ್ನು ಕರ್ನಾಟಕದ ರೈತರ ಮೇಲೆ ತೀರಿಸಿದಂತಿದೆ’ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯಿಸಿದ್ದಾರೆ.
‘ನಮ್ಮ ಜಲಾಶಯಗಳು ಖಾಲಿಯಾಗಿವೆ. ಕಳೆದ ಎರಡು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇನ್ನೂ ಮಳೆ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ 4 ಟಿಎಂಸಿ ಅಡಿ ನೀರನ್ನು
ಎಲ್ಲಿಂದ ಬಿಡಲು ಸಾಧ್ಯ?’ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಇದು ಚುನಾವಣೆಯ ಸಮಯ. ಸರ್ಕಾರಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ರಾಜ್ಯದ ಜನರನ್ನು ತಲ್ಲಣಗೊಳಿಸುವ ತೀರ್ಪು ಬಂದಿದೆ. ಈ ತೀರ್ಪನ್ನು ಪುನರ್ಪರಿಶೀಲನೆ ಮಾಡುವಂತೆ ಕೋರಿ ರಾಜ್ಯದ ಪರ ವಕೀಲರು ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.