ಬೆಂಗಳೂರು: ನಟಿ ಶ್ರುತಿ ಹರಿಹರನ್ ಬುಧವಾರ ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿ ಮೀ–ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಶ್ರುತಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಆನಂತರ ಹೇಳಿಕೆಯನ್ನು ದಾಖಲಿಸುವಂತೆ ಶ್ರುತಿ ಅವರಿಗೆ ನೋಟಿಸ್ ನೀಡಿತ್ತು.
ವಕೀಲ ಅನಂತ್ ನಾಯ್ಕ್ ಅವರ ಜೊತೆ ಆಯೋಗದ ಮುಂದೆ ಹಾಜರಾದ ಶ್ರುತಿ ‘ವಿಸ್ಮಯ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದುಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ವಿವರಿಸಿದರು. ನಟಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡು ಹೋಗಿ ಅವರು ಮಾಹಿತಿ ಪಡೆದರು.
‘ಚಿತ್ರರಂಗದಲ್ಲಿ ಅನೇಕರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ’ ಎಂದು ಶ್ರುತಿ ಆರೋಪಿಸಿದ್ದಾಗಿ ಆಯೋಗದ ಅಧ್ಯಕ್ಷರು ತಿಳಿಸಿದರು.
ಆನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶ್ರುತಿ ಹರಿಹರನ್, ‘ನನ್ನ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊ ದಾಖಲೆ ಇದೆ. ಅದನ್ನು ಕೋರ್ಟ್ಗೆ ನೀಡಿದ್ದೇನೆ. ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದರು.
‘ನಾನು ಸಕ್ಕರೆಯಂತೆ, ಮಾಧ್ಯಮದವರು ಇರುವೆಯಂತೆ’ ಎಂಬ ಹೇಳಿಕೆಯನ್ನು ತಾವು ನೀಡಿಲ್ಲ ಎಂದೂ ನಟಿ ಸ್ಪಷ್ಟಪಡಿಸಿದರು.
‘ನ. 28ರವರೆಗೆ ಬಂಧನ ಬೇಡ’
‘ಶ್ರುತಿ ಹರಿಹರನ್ ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರನ್ನು ನ. 14ರವರೆಗೆ ಬಂಧಿಸಬಾರದು’ ಎಂದು ಈ ಮೊದಲು ನೀಡಿದ್ದ ಆದೇಶವನ್ನು ಹೈಕೋರ್ಟ್ ಇದೇ 28ರವರೆಗೆ ವಿಸ್ತರಿಸಿದೆ.
‘ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಶ್ರುತಿ ಹರಿಹರನ್ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ಅರ್ಜುನ್ ಸರ್ಜಾ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲ ಎಸ್.ರಾಚಯ್ಯ ಅವರು ಸಮಯಾವಕಾಶ ಕೋರಿದ ಕಾರಣ ನ್ಯಾಯಮೂರ್ತಿಗಳು ಇದೇ 28ರವರೆಗೆ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆ ಮುಂದೂಡಿದರು.
‘ಶ್ರುತಿ ಮೀ–ಟೂ ಆಂದೋಲನದ ನಾಯಕಿಯಾಗಲು ಹವಣಿಸಿದಂತಿದೆ. ಪ್ರಸಿದ್ಧಿಯ ಹುಚ್ಚಿನಲ್ಲಿ ಆಕೆ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ. ಆದ್ದರಿಂದ ಎಫ್ಐಆರ್ ರದ್ದುಗೊಳಿಸಬೇಕು’ ಎಂಬುದು ಅರ್ಜುನ್ ಸರ್ಜಾ ಕೋರಿಕೆ.
ಅರ್ಜುನ್ ಸರ್ಜಾ ಬಂಧಿಸದಂತೆ ನೀಡಿದ್ದ ಆದೇಶ ವಿಸ್ತರಣೆ
‘ನಟಿ ಶ್ರುತಿ ಹರಿಹರನ್ ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರನ್ನು ನ.14ರವರೆಗೆ ಬಂಧಿಸಬಾರದು’ ಎಂದು ಈ ಮೊದಲು ನೀಡಿದ್ದ ಆದೇಶವನ್ನು ಹೈಕೋರ್ಟ್ ಇದೇ 28ರವರೆಗೆ ವಿಸ್ತರಿಸಿದೆ.
‘ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಶ್ರುತಿ ಹರಿಹರನ್ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ಅರ್ಜುನ್ ಸರ್ಜಾ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲ ಎಸ್.ರಾಚಯ್ಯ ಅವರು ಸಮಯಾವಕಾಶ ಕೋರಿದ ಕಾರಣ ನ್ಯಾಯಮೂರ್ತಿಗಳು ಇದೇ 28ರವರೆಗೆ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆ ಮುಂದೂಡಿದರು.
‘ಶ್ರುತಿ ಮೀ–ಟೂ ಆಂದೋಲನದ ನಾಯಕಿಯಾಗಲು ಹವಣಿಸಿದಂತಿದೆ. ಪ್ರಸಿದ್ಧಿಯ ಹುಚ್ಚಿನಲ್ಲಿ ಆಕೆ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ. ಆದ್ದರಿಂದ ಎಫ್ಐಆರ್ ರದ್ದುಗೊಳಿಸಬೇಕು’ ಎಂಬುದು ಅರ್ಜುನ್ ಸರ್ಜಾ ಕೋರಿಕೆ.
ಇದನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.