ಉನ್ನಾವೊ(ಉತ್ತರ ಪ್ರದೇಶ): ಒಂದೇ ಸಿರಿಂಜ್ನಿಂದ ಹಲವಾರು ಜನರಿಗೆ ಚುಚ್ಚುಮದ್ದು ನೀಡಿದ್ದರಿಂದ 21 ಜನ ಎಚ್ಐವಿ ಸೋಂಕಿಗೆ ಗುರಿಯಾಗಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದೆ.
ರಾಜ್ಯ ಸರ್ಕಾರ ನಡೆಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
‘ರಾಜೇಂದ್ರ ಕುಮಾರ್ ಎಂಬ ಸ್ಥಳೀಯನೊಬ್ಬ ಕಡಿಮೆ ವೆಚ್ಚಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿ ಒಂದೇ ಸಿರಿಂಜ್ ಬಳಸಿ ನೂರಾರು ಜನರಿಗೆ ಚುಚ್ಚುಮದ್ದು ನೀಡುತ್ತಿದ್ದ. ಆತನ ಚಿಕಿತ್ಸೆಯಿಂದಲೇ 21 ಜನರಿಗೆ ಸೋಂಕು ತಗಲಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ’ ಎಂದು ಉನ್ನಾವೊದ ಮುಖ್ಯ ಆರೋಗ್ಯ ಅಧಿಕಾರಿ ಡಾ.ಎಸ್.ಪಿ.ಚೌಧರಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಸಮೀಕ್ಷೆ ನಡೆಸಲು ದ್ವಿಸದಸ್ಯರ ಸಮಿತಿಯೊಂದನ್ನು ಆರೋಗ್ಯ ಇಲಾಖೆ ರಚಿಸಿತ್ತು. ಸಮಿತಿಯು ಪ್ರದೇಶದ ಮೂರು ಸ್ಥಳಗಳಲ್ಲಿ ಜನವರಿ 24ರಿಂದ 27ರವರೆಗೆ ಎಚ್ಐವಿ ಪರೀಕ್ಷಾ ಶಿಬಿರ ಆಯೋಜಿಸಿತ್ತು. ಪರೀಕ್ಷೆಗೆ ಒಳಪಟ್ಟ 566 ಜನರಲ್ಲಿ 21 ಮಂದಿ ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿದೆ.
ರಾಜೇಂದ್ರ ಕುಮಾರ್ ಮೇಲೆ ದೂರು ದಾಖಲಿಸಿಕೊಂಡು, ಸೋಂಕಿತರನ್ನು ವಿಶೇಷ ಚಿಕಿತ್ಸೆಗಾಗಿ ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಪ್ರತಿಕ್ರಿಯಿಸಿ, ‘ಪರವಾನಗಿ ಇಲ್ಲದೆ ಚಿಕಿತ್ಸೆ ನೀಡುತ್ತಿರುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿ ಟ್ರಕ್ ಚಾಲಕರಿಗೆ ಚಿಕಿತ್ಸೆ ನೀಡುತ್ತಿರುವವರ ಮೇಲೂ ನಿಗಾ ಇಡುತ್ತೇವೆ’ ಎಂದಿದ್ದಾರೆ.
2016ರ ಅಂತ್ಯಕ್ಕೆ ದೇಶದಲ್ಲಿ 21 ಲಕ್ಷ ಎಚ್ಐವಿ ಸೋಂಕು ಪೀಡಿತರಿದ್ದರು ಎಂದು 2017ರ ಎಐಡಿಎಸ್ ವರದಿ ಹೇಳುತ್ತದೆ.