ನವದೆಹಲಿ: ಪರೀಕ್ಷಾ ಪ್ರಕ್ರಿಯೆಯಲ್ಲಿ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟವಾಗಿ ಹೇಳಿದೆ.
ಪರೀಕ್ಷಾ ಪ್ರಕ್ರಿಯೆ ಬಗ್ಗೆ ಸಂದೇಹ ಬಾರದ ಹೊರತು ನ್ಯಾಯಾಲಯಗಳ ಮಧ್ಯೆ ಪ್ರವೇಶ ಅನಗತ್ಯ. ಉತ್ತರ ಪತ್ರಿಕೆಯ ಪ್ರತಿ ಉತ್ತರವನ್ನೂ ಸರಿ, ತಪ್ಪು ಎಂದು ಮೌಲ್ಯಮಾಪನ ಮಾಡುವುದು ನ್ಯಾಯಾಲಯಗಳ ಕೆಲಸವಲ್ಲ ಎಂದು ಕೋರ್ಟ್ ಹೇಳಿದೆ.
ಉತ್ತರ ಪ್ರದೇಶ ಲೋಕಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ದೋಷಪೂರಿತ ‘ಕೀ’ ಉತ್ತರಗಳ ವಿರುದ್ಧ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗ ಪರಿಶೀಲನೆ ಹೆಸರಿನಲ್ಲಿ ನ್ಯಾಯಾಲಯಗಳು ಉತ್ತರಗಳನ್ನು ಮೌಲ್ಯಮಾಪನ ಮಾಡಲು ಹೊರಟರೆ ಇಡೀ ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಸಂದೇಹ ಮೂಡುತ್ತದೆ. ನ್ಯಾಯಾಲಯಗಳ ಮಧ್ಯೆ ಪ್ರವೇಶಕ್ಕೂ ಒಂದು ಇತಿಮಿತಿ ಇರುತ್ತದೆ ಎಂದು ದ್ವಿಸದಸ್ಯ ಪೀಠ ಹೇಳಿದೆ.
ಪರೀಕ್ಷೆಯ ಪಾರದರ್ಶಕತೆ ಬಗ್ಗೆ ಪರಾಮರ್ಶೆ ನಡೆಸಬಹುದು. ಉತ್ತರಗಳ ಮೌಲ್ಯ ಮಾಪನ ಸಾಧ್ಯವಿಲ್ಲ ಎಂದು ಪೀಠ ಹೇಳಿತು