ಯಾದಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಶನಿವಾರ ಜಿಲ್ಲಾ ಪ್ರವಾಸದಲ್ಲಿ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪೂರ್ತಿ ಹಿಂದಿಯಲ್ಲೇ ಮಾತನಾಡಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಜನೌಷಧ ಕೇಂದ್ರದ ಉದ್ಘಾಟನೆಯಲ್ಲಿ, ಪೂರ್ಣ ಹಿಂದಿಯಲ್ಲಿಯೇ ಭಾಷಣ ಮಾಡಿದರು. ಹಿಂದಿ ಅರ್ಥವಾಗದ ರೋಗಿಗಳು, ಅವರ ಸಂಬಂಧಿಕರು ಅಲ್ಲಿದ್ದರು. ಅಲ್ಲಿಂದ ಗ್ರಂಥಾಲಯ ಇಲಾಖೆಯ ಕಾರ್ಯಕ್ರಮ, ಬಿಜೆಪಿ ಕಚೇರಿಯಲ್ಲಿಯೂ ಹಿಂದಿಯಲ್ಲಿಯೇ ಮಾತನಾಡಿದರು.
ನಂತರ ಕೆಡಿಪಿ ಸಭೆ ನಡೆಸಿದ ಸಚಿವರು, ಹಿಂದಿಯಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಶ್ನೆಗಳನ್ನು ಕೂಡ ಹಿಂದಿಯಲ್ಲಿ ಕೇಳಿದರು.
ಕೊರೊನಾ–ಕರುನಾಕರ ರೆಡ್ಡಿ!
‘ನಮ್ಮ ದೇಶದಲ್ಲಿ ಕೋವಿಡ್ –19 ಸೋಂಕಿನ ಬಗ್ಗೆ ಬಹಳಷ್ಟು ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಾನು ಈ ಹೆಸರು ಕೇಳಿ ನಕ್ಕಿದ್ದೇನೆ. ‘ಕೊರೊನಾ’ ಎಂಬುದು ಕರುಣಾಕರ ರೆಡ್ಡಿ ಹೆಸರಿನಂತಿದೆ’ ಎಂದು ಸಚಿವರು ವ್ಯಂಗ್ಯವಾಡಿದರು.
‘ದೇಶದಲ್ಲಿ ಎಲ್ಲಿಯೂ ಕೋವಿಡ್ –19 ಸೋಂಕು ಪತ್ತೆಯಾಗಿಲ್ಲ. ಈ ಭಾಗದಲ್ಲಿ ಹೆಚ್ಚು ಬಿಸಿಲಿರುವ ಕಾರಣ ಈ ಸೋಂಕು ಇಲ್ಲಿ ಬದುಕುಳಿಯಲ್ಲ. ಹೀಗಾಗಿ ಯಾರೂ ಗಾಬರಿಯಾಗಬೇಡಿ’ ಎಂದು ಹೇಳಿದರು.