ಚಿಕ್ಕಮಗಳೂರು: ಯುವಜನ ಸಬಲೀಕರಣ–ಕ್ರೀಡಾ ಸಚಿವ ಸಿ.ಟಿ.ರವಿ ಅವರು ಕೆಸರು ಗದ್ದೆ ಓಟ ಸ್ಪರ್ಧೆಯಲ್ಲಿ, ಬಿದ್ದು ಎದ್ದು ಓಡಿ ಗಮ್ಯ ತಲುಪಿದ ಪರಿ ಗಮನ ಸೆಳೆಯಿತು.
ಚಿಕ್ಕಮಗಳೂರು ಹಬ್ಬ (ಜಿಲ್ಲಾ ಉತ್ಸವ) ಅಂಗವಾಗಿ ಆಯೋಜಿಸಿರುವ ಕ್ರೀಡೋತ್ಸವದ ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ ಸಚಿವ ರವಿ ರಾಜಕಾರಣಿಗಳ ವಿಭಾಗದಲ್ಲಿ ಭಾಗವಹಿಸಿದ್ದರು. ಬರ್ಮುಡಾ ಚಡ್ಡಿ, ಟಿ ಶರ್ಟ್ ಧರಿಸಿ ಗದ್ದೆಗಿಳಿದ ರವಿ ಸ್ಪರ್ಧಿಗಳೊಂದಿಗೆ ಬಿರುಸಾಗಿ ಓಡಿದರು.
ಆರಂಭದಲ್ಲಿ ವೇಗ ಕಾಪಾಡಿಕೊಂಡು ಮುಂದಿದ್ದ ರವಿ ಅವರು ಗಮ್ಯದ ಸನಿಹಕ್ಕೆ ಬಂದಾಗ ಮುಗ್ಗರಿಸಿದರು. ಮೂರು ಬಾರಿ ಬಿದ್ದರೂ ಬಿಡದೆ ಗಮ್ಯ ತಲುಪಿದರು.
ಕೆಸರು ಗದ್ದೆಯಲ್ಲಿ ನಡೆದ ಹಗ್ಗ ಜಗ್ಗಾಟದಲ್ಲೂ ಸಚಿವ ರವಿ ಭಾಗವಹಿಸಿದ್ದರು. ಕ್ರೀಡಾ ಸಚಿವರ ಉತ್ಸಾಹ–ಉಲ್ಲಾಸ ಕಂಡು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಚಿಕ್ಕಮಗಳೂರಿನಲ್ಲಿ ಇದೇ 28ರಿಂದ ಮಾರ್ಚ್ 1ರವರೆಗೆ ಚಿಕ್ಕಮಗಳೂರು ಹಬ್ಬ ನಡೆಯಲಿದೆ.