ಹೊಸಪೇಟೆ: '2018ರ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್–ಜೆ.ಡಿ.ಎಸ್. ಮದುವೆಯಾಗಿತ್ತು. ಅದು ಮುರಿದು ಬಿದ್ದಿದೆ. ಸೋಡಾ ಚೀಟಿ ಕೊಟ್ಟಿದ್ದಾರೆ. ಮತ್ತೆ ಅವರು ಮದುವೆಯಾಗಲ್ಲ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಾಖ್ಯಾನ ಮಾಡಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ಸಲ ಸೋಡಾ ಚೀಟಿ ಕೊಟ್ಟ ಮೇಲೆ ಕೂಡಲ್ಲ. ಕಾಂಗ್ರೆಸ್–ಜೆ.ಡಿ.ಎಸ್. ಮರು ಮದುವೆಯಾಗಲ್ಲ' ಎಂದರು.
‘ಹೋರಿ ಬೆನ್ನು ಹತ್ತಿದ ನರಿ, ಅದರ ಮಾಂಸ ತಿನ್ನುವ ಕನಸು ಕಾಣುತ್ತಿತ್ತು. ಅದರಂತೆ ಕಾಂಗ್ರೆಸ್ಸಿಗರು ಬಿಜೆಪಿ ಸರ್ಕಾರ ಪತನವಾಗುವ ಕನಸು ಕಾಣುತ್ತಿದ್ದಾರೆ. ಆದರೆ, ಅದು ಈಡೇರುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೂರುವರೆ ವರ್ಷ ಅಧಿಕಾರ ನಡೆಸಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.