ಜಮಖಂಡಿ: ‘ಬ್ರಾಹ್ಮಣ ಸಮಾಜದೊಂದಿಗೆ ನಮ್ಮ ಕುಟುಂಬ ಬಹಳ ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದೆ. ಬ್ರಾಹ್ಮಣ ಸಮಾಜದ ಬಗ್ಗೆ ತುಂಬಾ ಗೌರವ ಇದೆ. ಬಾಯ್ತಪ್ಪಿನಿಂದ ಬ್ರಾಹ್ಮಣರ ಬಗ್ಗೆ ಮಾತನಾಡಿದ್ದಕ್ಕೆ ಕ್ಷಮೆ ಯಾಚಿಸುವೆ’ ಎಂದು ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಇಲ್ಲಿನ ಗಿಂಡಿವಿಠ್ಠಲ ಮಂದಿರದಲ್ಲಿ ಗುರುವಾರ ನಡೆದ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
‘ಶಾಸಕನಾಗಬೇಕೆಂದು ಎಂದೂ ಬಯಸಿರಲಿಲ್ಲ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಶಾಸಕನಾಗಿದ್ದೇನೆ. ಬ್ರಾಹ್ಮಣ ಸಮಾಜದ ಸಹಕಾರ ಅತೀ ಅವಶ್ಯವಾಗಿದೆ’ ಎಂದರು.
ಈಚೆಗೆ ನಡೆದಿದ್ದ ಅಭಿನಂದನಾ ಸಮಾರಂಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನನ್ನ ತಂದೆ ಸೋಲಿಸಿದ್ದರು. ಈಗ 40 ಸಾವಿರ ಮತಗಳ ಅಂತರದಿಂದ ಬ್ರಾಹ್ಮಣ ಸಮಾಜದ ವ್ಯಕ್ತಿಯನ್ನು ಸೋಲಿಸುವ ಅವಕಾಶ ನನಗೆ ಸಿಕ್ಕಿತ್ತು ಎಂದು ಅವರು ಹೇಳಿದ ವಿಡಿಯೊ ವೈರಲ್ ಆಗಿತ್ತು.