ಹನೂರು (ಚಾಮರಾಜನಗರ ಜಿಲ್ಲೆ): ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ, ಗುರುವಾರ ಮಹದೇಶ್ವರ ಬೆಟ್ಟದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 76 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಈ ಪೈಕಿ 10 ಅಂತರ್ಜಾತಿ ವಧು– ವರರು ಹಸೆಮಣೆ ಏರಿದ್ದು ವಿಶೇಷವಾಗಿತ್ತು. ಕಾವ್ಯಾ ಎಂಬುವವರು ಅಂಗವೈಕಲ್ಯ ಹೊಂದಿರುವ ಮಹೇಶ್ ಅವರ ಜೊತೆ ಸಪ್ತಪದಿ ತುಳಿದರು. ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಮಹೇಶ್, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇವಾಲಯದ ರಂಗಮಂದಿರ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಶಾಸಕ ಆರ್.ನರೇಂದ್ರ ಅವರು ನವ ಜೋಡಿಗಳಿಗೆ ಕಾಲುಂಗುರ ಮತ್ತು ತಾಳಿ ವಿತರಿಸಿದರು.
ಸಮಾರಂಭಕ್ಕೆ ಸಾಕ್ಷಿಯಾಗಿದ್ದ ಪೋಷಕರು ಹಾಗೂ ಸಂಬಂಧಿಕರು ವಧು– ವರರಿಗೆ ಅಕ್ಷತೆ ಹಾಕಿ, ಶುಭ ಹಾರೈಸಿದರು. ಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷ ಪಟ್ಟದ ಗುರುಸ್ವಾಮಿ ಆಶೀರ್ವದಿಸಿದರು.
ಸಿ.ಪುಟ್ಟರಂಗಶೆಟ್ಟಿಅವರುಪ್ರತಿ ದಂಪತಿಗೆ ವೈಯಕ್ತಿಕವಾಗಿ ₹1,000 ಪ್ರೋತ್ಸಾಹಧನ ವಿತರಿಸಿದರು.
ಕೊನೆಗಳಿಗೆಯಲ್ಲಿ ದುರಸ್ತಿ: ಪಾಲಾರ್ನಿಂದ ಬೆಟ್ಟಕ್ಕೆ ಕಾವೇರಿ ನೀರು ಪಂಪ್ ಮಾಡುವ ಯಂತ್ರ ಕೊನೆಗಳಿಗೆಯಲ್ಲಿ ದುರಸ್ತಿಯಾಗಿದ್ದರಿಂದ ಗುರುವಾರ ನೀರಿನ ಸಮಸ್ಯೆ ಕಂಡು ಬರಲಿಲ್ಲ.10 ದಿನಗಳ ಹಿಂದೆ ಯಂತ್ರ ಕೆಟ್ಟು ಹೋಗಿದ್ದರಿಂದ ಬೆಟ್ಟಕ್ಕೆ ಬುಧವಾರ ರಾತ್ರಿವರೆಗೂ ನೀರು ಪೂರೈಕೆಯಾಗಿರಲಿಲ್ಲ.