ಅನಂತಪುರ, ನ. 20 (ಯುಎನ್ಐ, ಪಿಟಿಐ)– ಕೇಂದ್ರದ ಇಬ್ಬರು ಸಚಿವರು ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣದ ಕುರಿತು ಅವರ ವಿರುದ್ಧ ‘ಅನುಷ್ಠಾನಬದ್ಧ ಆಜ್ಞೆ’ ಯಾವುದನ್ನೂ ತಾವು ಹೊರಡಿಸಿರಲಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಇಂದು ಇಲ್ಲಿ ಹೇಳಿದರು.
ಕೇಂದ್ರ ಸಮಾಜ ಕಲ್ಯಾಣ ಸಚಿವ ಸೀತಾರಾಂ ಕೇಸರಿ ಅವರು ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹಿಸಿದರು ಹಾಗೂ ಸಚಿವ ಕಲ್ಪನಾಥ್ ರಾಯ್ ಅವರು ಚುನಾವಣೆ ನಡೆಯಲಿರುವ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಿಗೆ ಹೆಚ್ಚು ಸಕ್ಕರೆ ಬಿಡುಗಡೆ ಮಾಡಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವರು ಎಂದು ಆಪಾದಿಸಲಾಗಿದೆ.
ಈ ಬ್ರಹ್ಮಚಾರಿಗೆ ‘ಸಂಸಾರ’ ಕುತೂಹಲ
ಹೈದರಾಬಾದ್, ನ. 20 (ಯುಎನ್ಐ)– ಭಾರತೀಯ ರಾಜಕಾರಣದ ಪ್ರಸಿದ್ಧ ಬ್ರಹ್ಮಚಾರಿ ಎನಿಸಿಕೊಂಡಿರುವ ಬಿಜೆಪಿ ನಾಯಕ ವಾಜಪೇಯಿ ಅವರು ಮದುವೆ ಮತ್ತು ಆ ನಂತರ ವ್ಯಕ್ತಿಯೊಬ್ಬನಲ್ಲಿ ಉಂಟಾಗುವ ಬದಲಾವಣೆಗಳನ್ನು ತಿಳಿದುಕೊಳ್ಳಲು ಈಗ ಬಹಳ ಕುತೂಹಲಿಯಾಗಿದ್ದಾರೆ.
ತಮ್ಮ 74ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗಿರುವ ತೆಲುಗುದೇಶಂ ಪಕ್ಷದ ಅಧ್ಯಕ್ಷ ಎನ್.ಟಿ. ರಾಮರಾವ್ ಅವರಲ್ಲಿ ಯಾವ ರೀತಿ ಬದಲಾವಣೆ ಉಂಟಾಗಿದೆ ಎಂಬ ಕುತೂಹಲ ಅವರಿಗೆ.