ಬೆಂಗಳೂರು: ಮುಂಗಾರು ಚುರುಕುಗೊಂಡಿದ್ದು, ಶುಕ್ರವಾರ ರಾಜ್ಯದೆಲ್ಲೆಡೆ ವ್ಯಾಪಿಸಿದೆ. ಮುಂದಿನ ನಾಲ್ಕರಿಂದ ಐದು ದಿನಗಳು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆ ಬಳಿಕ ಮತ್ತೆ ದುರ್ಬಲವಾಗಲಿದೆ.
ಮುಂಗಾರು ತಡವಾಗಿ ರಾಜ್ಯವನ್ನು ಪ್ರವೇಶಿಸಿದ್ದರೂ ಶುಕ್ರವಾರ ಚುರುಕುಗೊಳ್ಳುವ ಮೂಲಕ ರಾಜ್ಯದ ಜನತೆಯಲ್ಲಿ ಹರ್ಷ ಮೂಡಿಸಿದೆ. ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಮತ್ತು ಬೆಂಗಳೂರಿನಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮುಂದಿನ ಹತ್ತು ದಿನಗಳ ಮಳೆಯ ಮುನ್ಸೂಚನೆ ಪ್ರಕಾರ, ಐದು ದಿನಗಳ ಬಳಿಕ ಮುಂಗಾರು ಕೊಂಚ ದುರ್ಬಲಗೊಳ್ಳಲಿದೆ. ಇದರಿಂದಾಗಿ ಕರಾವಳಿ, ದಕ್ಷಿಣ ಒಳನಾಡು ಮತ್ತು ಮಲೆನಾಡಿನಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಮುಂದಿನ ಮೂರು– ನಾಲ್ಕು ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಲಿದೆ. ಜೂನ್ 25 ರಂದು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು, ಬೆಳಗಾವಿ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಮುಂದಿನ ಐದು ದಿನ ಸಾಧಾರಣದಿಂದ ಭಾರಿ ಮಳೆಯಾಗುವ ಸೂಚನೆ ಇದೆ.
ಮುಂಗಾರು ತಡವಾಗಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಜೂನ್ ತಿಂಗಳ ವಾಡಿಕೆಯ ಮಳೆ ಪ್ರಮಾಣದಲ್ಲಿ ಶೇ 25 ರಷ್ಟೂ ಮಳೆ ಆಗದ ಕಾರಣ ಕೃಷಿ ಕಾರ್ಯದ ಮೇಲೆ ಪರಿಣಾಮ ಬೀರಿದೆ ಕೃಷಿ ಇಲಾಖೆ ಮೂಲಗಳು ತಿಳಿಸಿವೆ.