ಬೆಂಗಳೂರು:ಮಕ್ಕಳ ಗ್ರಂಥಾಲಯವಿದ್ದ ಜಾಗದಲ್ಲೇ ಕಚೇರಿ ತೆರೆಯಲು ಮುಂದಾಗುವ ಮೂಲಕ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಪ್ರಕರಣ ಪ್ರಧಾನಿ ಕಚೇರಿ ತಲುಪಿದೆ.
ತೇಜಸ್ವಿ ಸೂರ್ಯ ಅವರು ಜಯನಗರ 5ನೇ ಬ್ಲಾಕ್ನಲ್ಲಿರುವಬಿಬಿಎಂಪಿ ಕಟ್ಟಡದಲ್ಲಿ ನೂತನ ಕಚೇರಿ ಆರಂಭಿಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಆರ್ಟಿಐ ಹೋರಾಟಗಾರ ಮರಿಲಿಂಗೇಗೌಡ ಮಾಲಿ ಪಾಟೀಲ್ ಅವರು ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘ಪ್ರಧಾನಿಯವರು ಮಧ್ಯಪ್ರವೇಶಿಸುವ ಮೂಲಕ ಸಾರ್ವಜನಿಕ ಆಸ್ತಿಯನ್ನು ಉಳಿಸಬೇಕು. ಅಷ್ಟೇ ಅಲ್ಲ, ಸಾರ್ವಜನಿಕ ಆಸ್ತಿಯ ಮಹತ್ವದ ಬಗ್ಗೆ ಸಂಸದರಿಗೆ ಮನವರಿಕೆ ಮಾಡಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ‘ಸಂಸದರಿಗೆ ಸ್ಥಳ ಒದಗಿಸಬೇಕಾಗಿದ್ದರಿಂದ ಪಾಲಿಕೆ ಕಟ್ಟಡದಲ್ಲಿ ಕಚೇರಿಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಪರೀಕ್ಷೆ ತಯಾರಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲು ಮಕ್ಕಳಿಗೆ ಸಮಸ್ಯೆಯಾದರೆ ಪರ್ಯಾಯ ಸ್ಥಳ ನೀಡುತ್ತೇವೆ’ ಎಂದು ತಿಳಿಸಿದರು.
ಶಾಲೆಗೆ ತೊಂದರೆಯಿಲ್ಲ: ‘ಬಿಬಿಎಂಪಿ ಕಟ್ಟಡದ ನೆಲಮಹಡಿಯಲ್ಲಿ ಜನಸಂಪರ್ಕ ಕಚೇರಿ ಆರಂಭಿಸುತ್ತಿದ್ದು, ಇದರಿಂದ ಆ ಕಟ್ಟಡದಲ್ಲಿರುವ ಶಾಲೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ’ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ. ‘ನೆಲಮಹಡಿಯಲ್ಲಿ ನಮ್ಮ ಕಚೇರಿ ಆರಂಭಿಸುತ್ತಿದ್ದು, ಮೊದಲನೇ ಮತ್ತು ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಗಳ ಗ್ರಂಥಾಲಯ, ಶಾಲಾ ತರಗತಿಗಳು ನಡೆಯುತ್ತವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.