ಮೈಸೂರು: 'ಸಿದ್ದರಾಮಯ್ಯ ಹಾಗೂ ಎಚ್.ಡಿ.ದೇವೇಗೌಡ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ' ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಟೀಕಿಸಿದರು.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರಿಗೂ ಮಂತ್ರಿ ಸ್ಥಾನ ಸಿಗಲಿದೆ. ಅವರು ಸ್ವಇಚ್ಛೆಯಿಂದ ಬಿಜೆಪಿಗೆ ಬಂದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಿಂದಲೇ ಸ್ಪರ್ಧಿಸಲಿದ್ದಾರೆ’ ಎಂದು ಶುಕ್ರವಾರ ಹೇಳಿದರು.
‘ಸಂಪುಟ ರಚನೆಯಲ್ಲಿ ಸಿ.ಎಂಗೆ ಪರಮಾಧಿಕಾರ ಇದೆ. ಈಗಿನ ಸ್ಥಿತಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿಯೇ ನಿರ್ಧರಿಸಬೇಕಾಗಿದೆ’ ಎಂದರು.
ಮೊದಲೇ ಎಚ್ಚರಿಸಿದ್ದೆ –ಮಂಜು: ‘ಜೆಡಿಎಸ್ ಜೊತೆ ಹೋದರೆ ಉಳಿಗಾಲ ಇಲ್ಲ ಎಂದು ಆರು ತಿಂಗಳ ಹಿಂದೆಯೇ ಸಿದ್ರಾಮಣ್ಣಗೆ ಎಚ್ಚರಿಸಿದ್ದೆ. ನನ್ನ ಮಾತು ಕೇಳಿದ್ದರೆ ಇಷ್ಟೊಂದು ಅನಾಹುತ ಉಂಟಾಗುತ್ತಿರಲಿಲ್ಲ' ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.
‘ಲೋಕಸಭೆ ಚುನಾವಣೆ ವೇಳೆ ಹಾಸನ ಕ್ಷೇತ್ರಕ್ಕೆ ಬಂದಿದ್ದ ಸಿದ್ರಾಮಣ್ಣ, ದೇವೇಗೌಡರ ಮಾತು ಕೇಳಿ ನನ್ನ ವಿರುದ್ಧ ಮಾತನಾಡಿದ್ದರು. ಆಗ ನನಗೆ ನೋವಾಗಿತ್ತು’ ಎಂದರು.
* ‘ಇವರಿಬ್ಬರೂ ಜೊತೆಗೂಡಿ ಒಂದು ವರ್ಷ ಸರ್ಕಾರ ನಡೆಸಿದ್ದೇ ಅದ್ಭುತ. ವಿರೋಧ ಪಕ್ಷದಲ್ಲಿರುವ ಇವರು ಈಗಲಾದರೂ ಗಂಭೀರವಾಗಿ ವರ್ತಿಸಬೇಕು. -ಶ್ರೀನಿವಾಸಪ್ರಸಾದ್, ಸಂಸದ