ಬಳ್ಳಾರಿ: ‘ಮೋದಿ ಸರ್ವಾಧಿಕಾರಿ ಧೋರಣೆಯ ಮಾತುಗಾರ ಅಷ್ಟೆ. ಈ ದೇಶದ ಆತ್ಮ ವಾದ ಕಾಂಗ್ರೆಸ್ ಸಾಧನೆಗಳನ್ನು ಅವರು ಬೇಕೆಂದೇ ಮರೆತು, ತಮ್ಮ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯದರ್ಶಿ 'ಮುಖ್ಯಮಂತ್ರಿ' ಚಂದ್ರು ಹೇಳಿದರು.
‘ಸಾಮಾಜಿಕ ನ್ಯಾಯದ ವಿಚಾರದಲ್ಲಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ 28ಲೋಕಸಭೆ ಕ್ಷೇತ್ರಗಳ ಪೈಕಿ ಒಂದರಲ್ಲೂ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡದೇ ಇರುವುದು ಇದಕ್ಕೆ ಸಣ್ಣ ನಿದರ್ಶನವಷ್ಟೇ’ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಸಂವಿಧಾನದ ಆಶಯಗಳನ್ನು ಕಾಂಗ್ರೆಸ್ ದಶಕಗಟ್ಟಳೆ ರಕ್ಷಿಸದೇ ಇದ್ದಿದ್ದರೆ ಮೋದಿ ಪ್ರಧಾನಿ ಆಗಲು ಸಾಧ್ಯವಿತ್ತೇ? ಕಾಂಗ್ರೆಸ್ ಜಾರಿಗೆ ತಂದ ಹಲವು ಜನಪರ ಕಾರ್ಯಕ್ರಮಗಳ ಹೆಸರುಗಳನ್ನು ಬದಲಿಸಿ ತಮ್ಮದೆಂದು ಹೇಳಿಕೊಳ್ಳುವುದು ಸರಿಯೇ’ ಎಂದು ಕೇಳಿದರು.
‘ರೈತರ ₹72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಆದರೆ ಕೇಂದ್ರ ಸರ್ಕಾರ ಉದ್ಯಮಿಗಳ ಸಾಲ ಮನ್ನಾ ಮಾಡಿದೆ’ ಎಂದು ವ್ಯಂಗ್ಯವಾಡಿದರು.
ಲೇಖಕರಾದ ಪ್ರೊ.ಎಸ್.ಜಿ.ಸಿದ್ದರಾಯ್ಯ, ‘ಬಿಜೆಪಿ ಅಭ್ಯರ್ಥಿಗಳು ಮೋದಿಯ ಮುಖವಾಡ ಧರಿಸಿ ಮತ ಯಾಚಿಸುತ್ತಿರುವುದು ಶೋಚನೀಯ. ಬಹುಸಂಸ್ಕೃತಿಯ ದೇಶದಲ್ಲಿ ಮೋದಿಯ ಸರ್ವಾಧಿಕಾರಿ ನೀತಿಯನ್ನು, ಏಕವ್ಯಕ್ತಿ, ಏಕ ಧರ್ಮವನ್ನು ಬೆಂಬಲಿಸುತ್ತಿದ್ದಾರೆ ಎಂಬುದರ ನಿದರ್ಶನ’ ಎಂದು ಪ್ರತಿಪಾದಿಸಿದರು.
ಸಂವಿಧಾನ ಬದಲಿಸುವ ಮಾತನಾಡುವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಆತಂಕಕಾರಿ. ಹೀಗಾಗಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುವವರನ್ನು, ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯುವವರನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಪ್ರೊ.ವಸುಂಧರಾ ಭೂಪತಿ, ಟಪಾಲ್ ಗಣೇಶ್, ಬಿ.ಟಿ.ಲಲಿತಾ ನಾಯಕ್, ಎನ್.ಗಂಗಿರೆಡ್ಡಿ ಇದ್ದರು.