ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಮಂದಿಯಿಂದ 9 ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ
Last Updated 21 ಏಪ್ರಿಲ್ 2018, 6:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಬಿಜೆಪಿಯ ಸಿ.ಟಿ.ರವಿ ಅವರು ಮೂರು, ಪಕ್ಷೇತರ ಆರು ಸೇರಿದಂತೆ ಒಟ್ಟು ಒಂಬತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.

ಪಕ್ಷೇತರವಾಗಿ ಮುನಿಯಾಬೋವಿ, ಎಚ್‌.ಡಿ.ರೇವಣ್ಣ, ಬಿ.ಎಂ.ಜಯಕುಮಾರ್‌, ಮನ್ಸೂರ್‌ ಅಹಮ್ಮದ್‌, ಕೆ.ಆರ್‌.ರಾಮಶೆಟ್ಟಿ. ಕೆ.ವಿ.ಪೃಥ್ವಿರಾಜ್‌ ಮತ್ತು ಬಿಜೆಪಿಯಿಂದ ಸಿ.ಟಿ.ರವಿ ಸೇರಿ ಒಟ್ಟು ಏಳು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಶಾಸಕ ಸಿ.ಟಿ.ರವಿ ಅವರು ಬೆಳಿಗ್ಗೆ ಕಾಮಧೇನು ಗಣಪತಿ ದೇಗುಲದಲ್ಲಿ ಪೂಜೆ ನೆರವೇರಿಸಿ ನಂತರ ತಾಲ್ಲೂಕು ಕಚೇರಿಗೆ ನೂರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ರವಿ ಅವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ನಿ ಪಲ್ಲವಿ ರವಿ (ಗೃಹಿಣಿ), ಸಿ.ಆರ್‌.ಸಮರ್ಥ್‌ ಸೂರ್ಯ ಮತ್ತು ಸಿ.ಆರ್‌.ಸಾರ್ಥಕ್‌ ಸೂರ್ಯ ಪುತ್ರರು ಇದ್ದಾರೆ.

ನಾಮಪತ್ರ ಸಲ್ಲಿಕೆ ನಂತರ ತಾಲ್ಲೂಕು ಕಚೇರಿಯ ಬಳಿಯ ಗಣಪತಿ ದೇಗುಲದಲ್ಲಿ ನಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ‘30 ವರ್ಷಗಳಿಂದ ಜನರ ನಡುವಿನಲ್ಲಿ ಇದ್ದುಕೊಂಡು ಕೆಲಸ ಮಾಡಿದ್ದೇನೆ. ಅಣ್ಣತಮ್ಮನಂತೆ ಜನ ಭಾವಿಸಿದ್ದಾರೆ. ಗೆಲ್ಲುವ ವಿಶ್ವಾಸ ಇದೆ. ಮನೆಮಗನಂತೆ ಇದ್ದೇನೆ. ಅಹಂಕಾರ ಇಲ್ಲ, ಜನರ ತೀರ್ಮಾನವೇ ಅಂತಿಮ’ ಎಂದು ಹೇಳಿದರು.

‘ಹತ್ತು ಚುನಾವಣೆಗೆ ಠೇವಣಿ ಇಡುವಷ್ಟು ಹಣವನ್ನು ಜನರು ಪ್ರೀತಿಯಿಂದ ಕೊಟ್ಟಿದ್ದಾರೆ. ಎರಡು ರೂಪಾಯಿಯಿಂದ ಎರಡು ಸಾವಿರದವರೆಗೆ ಕೊಟ್ಟಿದ್ದಾರೆ. ನನ್ನದು ಜಾತಿ ರಾಜಕಾರಣ ಅಲ್ಲ, ಪ್ರೀತಿನೀತಿ ಮತ್ತು ಅಭಿವೃದ್ಧಿ ರಾಜಕಾರಣ. ಈ ಕ್ಷೇತ್ರದ ಮತದಾರರು ಜಾತಿ ಮತ್ತು ದ್ವೇಷದ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ. 14 ವರ್ಷಗಳಿಂದ ಸಾಮರಸ್ಯ ಕಾಪಾಡಿದ್ದೇನೆ ಎಂಬ ನಂಬಿಕೆ ಇದೆ’ ಎಂದರು.

‘ಕ್ರಿಮಿನಲ್‌ಗಳನ್ನು ಬೆಂಬಲಿಸುವ ಕೆಲಸವನ್ನು ಮಾಡಿಲ್ಲ. ಎಲ್ಲ ವರ್ಗದವರಿಗೂ ರಾಜಕೀಯ ಅಧಿಕಾರ ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

ಸಿ.ಟಿ.ರವಿ ಪಲ್ಲವಿರವಿ
ಆಸ್ತಿಪಾಸ್ತಿ ₹ 3.56 ಕೋಟಿ ₹ 1.49 ಕೋಟಿ
ಸಾಲ ₹ 1.11 ಕೋಟಿ ₹ 1.05 ಕೋಟಿ
ಒಟ್ಟು ₹ 2.45 ಕೋಟಿ ₹ 44 ಲಕ್ಷ

ಚರಾಸ್ತಿ ₹ 1.87 ಕೋಟಿ ₹ 59.52 ಲಕ್ಷ
(400 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, ಜೀಪು) (810 ಗ್ರಾಂ ಚಿನ್ನ, 1.5 ಲಕ್ಷ ಮೌಲ್ಯದ ವಜ್ರಾಭರಣ, 6 ಕೆ.ಜಿ ಬೆಳ್ಳಿ)
ಸ್ಥಿರಾಸ್ತಿ ₹ 1.86 ಕೋಟಿ ₹ 67.89 ಲಕ್ಷ

ಕೋರ್ಟ್‌ ಪ್ರಕರಣಗಳು: ಎಂಟು ಪ್ರಕರಣಗಳು ಇತ್ಯರ್ಥಕ್ಕಾಗಿ ಬಾಕಿ ಇವೆ. ಬಾಕಿ ಇರುವ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಯೊಂದಿಗೆ ದಂಡನೀಯವಾದ ಯಾವುದೇ ಅಪರಾಧದ ಆಪಾದಿತನಾಗಿಲ್ಲ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖ ಇದೆ.

ತಡವಾಗಿ ಬಂದ ಪಲ್ಲವಿ...

ಸಿ.ಟಿ.ರವಿ ಅವರು ಮಧ್ಯಾಹ್ನ 12.30ರ ಹೊತ್ತಿಗೆ ತಾಲ್ಲೂಕು ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದರು. ಕಚೇರಿಯೊಳಕ್ಕೆ ರವಿ ಹೋದ ನಂತರ ಪತ್ನಿ ಪಲ್ಲವಿ ಅವರು ಕಚೇರಿ ಬಳಿಗೆ ಧಾವಿಸಿದರು. ಪ್ರವೇಶ ಬಾಗಿಲಿನಲ್ಲಿದ್ದ ಪೊಲೀಸರು ಒಳಹೋಗದಂತೆ ಅವರಿಗೆ ತಡೆವೊಡ್ಡಿ, ಯಾರು ಎಂದು ಪ್ರಶ್ನಿಸಿದರು. ಆಗ ಅವರು ರವಿ ಅವರ ಪತ್ನಿ ಎಂದು ಪಲ್ಲವಿ ತಿಳಿಸಿದರು. ನಂತರ ಪಲ್ಲವಿ ಅವರು ಫೋನಾಯಿಸಿ ಮನವರಿಕೆ ಮಾಡಿಕೊಟ್ಟು ಒಳಹೋದರು. ನಾಮಪತ್ರ ಸಲ್ಲಿಸುವಾಗ ರವಿ ಅವರೊಂದಿಗೆ ಬಿಜೆಪಿ ಮುಖಂಡರಾದ ಬಿ.ಜಿ.ಸೋಮಶೇಖರಪ್ಪ, ಈ.ಆರ್‌.ಮಹೇಶ್‌, ಕೋಟೆರಂಗನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT