ಮಡಿಕೇರಿ: ತಾಲ್ಲೂಕಿನ ಗಾಳಿಬೀಡು ಗ್ರಾಮದ ಪೊಲೀಸ್ ಗುರಿ ತರಬೇತಿ (ಫೈರಿಂಗ್ ರೇಂಜ್) ಮೈದಾನದಲ್ಲಿ ಭಾನುವಾರ ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ಜಿಲ್ಲಾಮಟ್ಟದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು.
100 ಮೀಟರ್ ದೂರದಲ್ಲಿದ್ದ ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹೊಡೆದ ಪರಿಣಾಮ ತೆಂಗಿನಕಾಯಿಯಿಂದ ನೀರು ಚಿಮ್ಮಿಸಲು ಹಲವು ಮಂದಿ ಯಶಸ್ವಿಯಾದರು. ಸುಮಾರು 25ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಮಹಿಳೆಯರೂ ಬಂದೂಕು ಹಿಡಿದು ತಮ್ಮ ಗುರಿ ಪ್ರದರ್ಶನ ನೀಡಿದರು.
ಇದೇ ವೇಳೆ ಸುಮನ್ ಡಿ. ಪನ್ನೇಕರ್ ಮಾತನಾಡಿ, ‘ಗ್ರಾಮೀಣ ಸಂಪ್ರದಾಯ, ಸಂಸ್ಕೃತಿ ಉಳಿವಿಗೆ ದಸರಾ ಕ್ರೀಡಾಕೂಟ ಸಹಕಾರಿ ಆಗಲಿದೆ. ಹಬ್ಬ ಹರಿದಿನಗಳು ಎಲ್ಲರನ್ನು ಒಂದುಗೂಡಿಸುವ ಜತೆಗೆ ಸ್ಫೂರ್ತಿಯನ್ನೂ ನೀಡುತ್ತವೆ ಎಂದರು.
ಸ್ಪರ್ಧೆಯ ಉಸ್ತುವಾರಿ ಪೊನ್ನಚ್ಚನ ಮಧು, ಸಮಿತಿ ಆಯೋಜನೆ ಮಾಡುತ್ತಿರುವ ಕ್ರೀಡಾಕೂಟಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ 10 ವರ್ಷಗಳಿಂದ ನಗರದಲ್ಲಿ ಸ್ಪರ್ಧೆ ನಡೆಸಲಾಗುತ್ತಿತ್ತು. ಈ ಬಾರಿ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂಥ ಸ್ಪರ್ಧೆಗಳು ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.