ಮೈಸೂರು: ನಗರದ ರಂಗಾಯಣದ ಮುಖ್ಯ ಕಟ್ಟಡದಲ್ಲಿರುವ ಲಾಂಛನ, ರಂಗಾಯಣ ಹೆಸರಿರುವ ಸುವರ್ಣಾಕ್ಷರಗಳು ಹಾಗೂ ಲೋಹದ ಆಕೃತಿಯನ್ನು ತೆರವುಗೊಳಿಸಲಾಗಿದೆ. ಈಗ ಲಾಂಛನವಿಲ್ಲದೆ ಬೋಳಾಗಿದೆ.
ಲಾಂಛನವನ್ನು ರಂಗಾಯಣದ ಸಂಸ್ಥಾಪಕ ನಿರ್ದೇಶಕ ಬಿ.ವಿ.ಕಾರಂತ ಅವರು 1989ರಲ್ಲಿ ನಿರ್ಮಿಸಿದ್ದರು. ಇದಕ್ಕೆ ವಿನ್ಯಾಸ ಮಾಡಿಕೊಟ್ಟಿದ್ದು ಜಯಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ (ಕಾವಾ) ಡೀನ್ ಆಗಿದ್ದ ಶೋಲಾಪುರ್ಕರ್. ಗಂಡಭೇರುಂಡಕ್ಕೆ ನಾಟಕ ಕ್ಷೇತ್ರದ ಲೇಪವನ್ನು ನೀಡಿ ಲೋಗೊ ರಚಿಸಲಾಗಿತ್ತು.
ಲಾಂಛನ ರಂಗಾಯಣದ ಇತರ ಭಾಗಗಳಲ್ಲೂ ಇವೆ. ಆದರೆ, ಶೋಲಾಪುರ್ಕರ್ ಅವರು ವಿನ್ಯಾಸಗೊಳಿಸಿದ್ದ ಕೊಳವೆಗಳಿಂದ ನಿರ್ಮಿಸಿದ್ದ ಆಕೃತಿಯಂತೆ ಬೇರಾವ ಕಡೆಯೂ ಇಲ್ಲ. ಹಾಗಾಗಿ, ಇದು ರಂಗಾಯಣಕ್ಕೆ ಆಗಿರುವ ನಷ್ಟ ಎನ್ನುವುದು ರಂಗಪ್ರಿಯರ ಅಳಲು.
ಹೊಸ ವಿನ್ಯಾಸಕ್ಕಾಗಿ ಬದಲಾವಣೆ
‘ಬಿ.ವಿ.ಕಾರಂತರಿಗೆ ಅವಮಾನಿಸುವುದು ಉದ್ದೇಶವಲ್ಲ. ಇದನ್ನು ಮರು ನಿರ್ಮಾಣ ಮಾಡಲಾಗುತ್ತದೆ’ ಎಂದು ರಂಗಾಯಣದ ನಿರ್ದೇಶಕಿ ಭಾಗೀರತಿ ಬಾಯಿ ಕದಂ ‘ಪ್ರಜಾವಾಣಿ’ಗೆ ತಿಳಿಸಿದರು.
‘ಲಾಂಛನ, ಕೊಳವೆ ಆಕೃತಿಯು ಹಲವೆಡೆ ತುಕ್ಕು ಹಿಡಿದಿತ್ತು. ಹಾಗಾಗಿ, ಅದನ್ನು ಹೊಸದಾಗಿ ನಿರ್ಮಿಸುತ್ತಿದ್ದೇವೆ. ಕಲಾವಿದ ದ್ವಾರಕಿ ಅವರು ಹೊಸ ಯೋಜನೆಯನ್ನು ಮುಂದಿಟ್ಟಿದ್ದಾರೆ. ರಂಗಾಯಣದ ವೈಭವ ಉಳಿಯುವಂತೆ, ವಿಸ್ತರಿಸುವಂತೆ ಹೊಸ ಲಾಂಛನವನ್ನು ಸ್ಥಾಪಿಸಲಾಗುವುದು’ ಎಂದು ಹೇಳಿದರು.