ಮೈಸೂರು: ಬಿಜೆಪಿ ಮೇಲಿನ ನಿಷ್ಠೆಯನ್ನು ರಾತ್ರೋರಾತ್ರಿ ಬದಲಿಸಿದ ಜೆಡಿಎಸ್, ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ಜತೆಗೆ ಅಧಿಕಾರ ಹಂಚಿಕೊಂಡಿದೆ.
ಬಿಜೆಪಿ ಜತೆಗಿನ ಹೊಂದಾಣಿಕೆ ಮುಂದುವರಿಸುವುದಾಗಿ ಶುಕ್ರವಾರ ರಾತ್ರಿ ವರೆಗೂ ಜಿಲ್ಲೆಯ ಜೆಡಿಎಸ್ ನಾಯಕರು ಹೇಳಿಕೊಂಡು ಬಂದಿದ್ದರು. ರಾತ್ರಿ ಇದ್ದಕ್ಕಿದ್ದಂತೆ ನಿಷ್ಠೆ ಬದಲಿಸಿ, ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಪ್ರಕಟಿಸಿದರು.
ಶನಿವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ವಿ.ಸಿ.ಪರಿಮಳಾ ಶ್ಯಾಂ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ನ ಗೌರಮ್ಮ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು. ‘ಮಾತು ತಪ್ಪಿದ ಜೆಡಿಎಸ್ಗೆ ಧಿಕ್ಕಾರ’ ಎಂದು ಘೋಷಣೆ ಕೂಗುತ್ತಾ ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆದರು.
ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಮತ್ತು ಜೆಡಿಎಸ್ ಸ್ಥಳೀಯ ಮುಖಂಡರಿಗೆ ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೂಚನೆಯಂತೆ ಕಾಂಗ್ರೆಸ್ ಜತೆ ಮೈತ್ರಿ ನಡೆದಿದೆ.
ಮೈಸೂರು ಜಿಲ್ಲಾ ಪಂಚಾಯಿತಿಗೆ 2016ರಲ್ಲಿ ಚುನಾವಣೆ ನಡೆದಿತ್ತು. 33 ತಿಂಗಳು ಜೆಡಿಎಸ್– ಬಿಜೆಪಿ ಜತೆಯಾಗಿ ಆಡಳಿತ ನಡೆಸಿವೆ. ಇನ್ನುಳಿದ 27 ತಿಂಗಳು ಜೆಡಿಎಸ್– ಕಾಂಗ್ರೆಸ್ ಅಧಿಕಾರ ಹಂಚಿಕೊಂಡಿವೆ.
49 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್– ಜೆಡಿಎಸ್ ಒಟ್ಟು 40 ಸ್ಥಾನಗಳನ್ನು ಹೊಂದಿವೆ. ಬಿಜೆಪಿ 8 ಸ್ಥಾನಗಳನ್ನು ಹೊಂದಿದ್ದು, ಒಬ್ಬರು ಪಕ್ಷೇತರ ಸದಸ್ಯ ಇದ್ದಾರೆ.