ಬೆಂಗಳೂರು:ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಹಾಡುವ ಅವಧಿಯನ್ನು 2 ನಿಮಿಷ 30 ಸೆಕೆಂಡಿಗೆ ನಿಗದಿ ಪಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಸಲ್ಲಿಸಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಭಾಗಶಃ ಒಪ್ಪಿಗೆ ಸೂಚಿಸಿದೆ.
ಈ ಕುರಿತು, ಸೂಕ್ತ ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅಧಿಕೃತ ಅಧಿಸೂಚನೆ ಯಾವುದೇ ಕ್ಷಣದಲ್ಲಿ ಹೊರಬೀಳಬಹುದು.
ಕಳೆದ ನವೆಂಬರ್ನಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ ನೇತೃತ್ವದ ಸಮಿತಿ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ರಾಷ್ಟ್ರಕವಿ ಕುವೆಂಪು ರಚನೆಯ ನಾಡಗೀತೆಯ ಯಾವುದೇ ಸಾಲುಗಳಿಗೆ ಕತ್ತರಿ ಹಾಕದೆ, ಹಿನ್ನೆಲೆ ಸಂಗೀತದ ಅವಧಿ ಕಡಿಮೆ ಮಾಡಬೇಕು ಎಂದು ಕೋರಲಾಗಿತ್ತು.
2014ರಲ್ಲಿ ಕೂಡ, ನಾಡಗೀತೆ ಅವಧಿಯನ್ನು 1.50 ನಿಮಿಷಕ್ಕೆ ಇಳಿಸುವಂತೆ ಸಾಹಿತಿ ಚನ್ನವೀರ ಕಣವಿ ನೇತೃತ್ವದ ಸಮಿತಿ ಪ್ರಸ್ತಾವ ಸಲ್ಲಿಸಿತ್ತು.