ಬೆಂಗಳೂರು: ದೇಶದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಕಲಿಕಾ ಮಟ್ಟಕ್ಕೆ ಹೋಲಿಸಿದರೆ ಕನ್ನಡ ನಾಡಿನ ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
‘ರಾಜ್ಯದ ವಿದ್ಯಾರ್ಥಿಗಳ ಪಠ್ಯ ಕಲಿಕಾ ಮಟ್ಟವು ರಾಷ್ಟ್ರದ ಸರಾಸರಿಗಿಂತ ಶೇ 10ರಷ್ಟು ಹೆಚ್ಚಿದೆ’ ಎಂದು ರಾಷ್ಟ್ರೀಯ ಸಾಧನಾ ಸಮೀಕ್ಷೆಯ (ಎನ್ಎಎಸ್) ವರದಿ ಉಲ್ಲೇಖಿಸಿದೆ.
ಶಿಕ್ಷಕರು ಬೋಧಿಸುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಶೇ 88ರಷ್ಟು ವಿದ್ಯಾರ್ಥಿಗಳು ಸಫಲರಾಗಿದ್ದಾರೆ. 3ನೇ ತರಗತಿ ವಿದ್ಯಾರ್ಥಿಗಳು ಭಾಷಾ ವಿಷಯ, ಗಣಿತ, ಪರಿಸರ ಅಧ್ಯಯನದ ಪ್ರಶ್ನೆಗಳಿಗೆ ಶೇ 75ರಷ್ಟು ಸರಿ ಉತ್ತರಗಳನ್ನು ನೀಡಿದ್ದಾರೆ.
5ನೇ ತರಗತಿ ವಿದ್ಯಾರ್ಥಿಗಳು ಭಾಷೆಯನ್ನು ಸರಿಯಾಗಿ ಗ್ರಹಿಸುತ್ತಿದ್ದು, ಗಣಿತ ಮತ್ತು ಪರಿಸರ ಅಧ್ಯಯನದಲ್ಲಿ ಶೇ 65 ರಷ್ಟು ಪ್ರಗತಿ ಸಾಧಿಸಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿನಡೆಸಿದ ಸಮೀಕ್ಷೆಯಲ್ಲಿ ದೇಶದ 701ಜಿಲ್ಲೆಗಳ 1.10 ಲಕ್ಷ ಶಾಲೆಯ 22 ಲಕ್ಷ ಮಕ್ಕಳು ಪಾಲ್ಗೊಂಡಿದ್ದರು.
**
ಗ್ರಹಿಕೆಯಲ್ಲೂ ಮುಂದೆ
2017ರ ನವೆಂಬರ್ನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ರಾಜ್ಯದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗಿಂತ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ವಿದ್ಯಾರ್ಥಿಗಳು ಹೆಚ್ಚು ಸರಿ ಉತ್ತರಗಳನ್ನು ನೀಡಿದ್ದಾರೆ. 8ನೇ ತರಗತಿಯ ಪ್ರಥಮಭಾಷೆ ವಿಷಯ ಬಿಟ್ಟು ಉಳಿದೆಲ್ಲಾ ಪಠ್ಯಗಳನ್ನು ಗ್ರಹಿಸುವಲ್ಲಿ ಒಬಿಸಿ ಮತ್ತು ಪರಿಶಿಷ್ಟ ಸಮುದಾಯದವರು ಮುಂದೆ ಇದ್ದಾರೆ.
**
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿನೂತನ ಚಟುವಟಿಕೆ ಅನುಷ್ಠಾನಗೊಳಿ ಸಿದ್ದರಿಂದ ಉತ್ತಮ ಫಲಿತಾಂಶ ಸಿಕ್ಕಿದೆ.
–ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
**
ಕೇವಲ ಪ್ರಶ್ನಾವಳಿ ಮೂಲಕ ಗುಣಮಟ್ಟ ನಿರ್ಧರಿಸಬಾರದು. ಇಂದಿಗೂ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಿವೆ. ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಯ ಅಂಶ ಸಮೀಕ್ಷೆಯಲ್ಲಿ ಇರಬೇಕಿತ್ತು
–ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.