ಬೆಂಗಳೂರು: ಪ್ರಕೃತಿ ವಿಕೋಪ, ಆಕಸ್ಮಿಕ ಅವಘಡ, ಮಾನವ ನಿರ್ಮಿತ ಕಾರಣ ಹಾಗೂ ಇನ್ನಿತರ ಕಾರಣಗಳಿಂದ ಮರಣ ಹೊಂದಿದಲ್ಲಿ, ಅಂಗವಿಕಲತೆ, ಗಾಯಗೊಂಡ ಪ್ರಕರಣಗಳಲ್ಲಿ ಎಲ್ಲ ಇಲಾಖೆಗಳಲ್ಲೂ ಏಕರೂಪದ ಪರಿಹಾರ ನೀಡಬೇಕು ಎಂದು ಕಂದಾಯ ಇಲಾಖೆ ಆದೇಶಿಸಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡಬೇಕು ಎಂದು ಸೂಚಿಸಿದೆ.
ಪ್ರಕೃತಿ ವಿಕೋಪದಿಂದ ಜೀವಹಾನಿಯಾಗಿದ್ದಲ್ಲಿ ಕೇಂದ್ರ ಸರ್ಕಾರದ ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಕಂದಾಯ ಇಲಾಖೆ ಪರಿಹಾರ ನೀಡುತ್ತಿದೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕೃಷಿ ಇಲಾಖೆ, ಕಾಡು ಪ್ರಾಣಿಯಿಂದ ಜೀವಹಾನಿಯಾಗಿದ್ದರೆ ಅರಣ್ಯ ಇಲಾಖೆ, ವಿದ್ಯುತ್ ಸಂಪರ್ಕದಿಂದ ಮರಣ ಹೊಂದಿದ್ದಲ್ಲಿ ಇಂಧನ ಇಲಾಖೆ, ರಸ್ತೆ ಅವಘಡಗಳಲ್ಲಿ ಮರಣ ಹೊಂದಿದ್ದಲ್ಲಿ ಸಾರಿಗೆ ಇಲಾಖೆ ಪರಿಹಾರ ನೀಡುತ್ತಿದೆ. ಇನ್ನಿತರ ಪ್ರಕರಣಗಳಲ್ಲಿ ಜೀವಹಾನಿಯಾಗಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುತ್ತಿದೆ.
ಸಮಾನ ಪರಿಹಾರ ನೀಡಲು ಹೊಸ ನೀತಿ ರೂಪಿಸಬೇಕು ಎಂದು 2017ರ ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯರು ಒತ್ತಾಯಿಸಿದ್ದರು.