ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಗಳಿ ಪ್ರದೇಶದಲ್ಲಿ ಸೋಮವಾರ ನಾಲ್ವರು ನಕ್ಸಲರು ಪೊಲೀಸರ ಗುಂಡಿನ ಚಕಮಕಿಗೆ ಹತರಾದ ಬೆನ್ನಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಜಿಲ್ಲೆಯ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಕೂಂಬಿಂಗ್ ಚಟುವಟಿಕೆ ಚುರುಕುಗೊಳಿಸಿದೆ.
8ರಿಂದ 10 ಮಂದಿ ತಂಡಗಳು ಒಂದೊಂದು ಕಡೆ ಸುತ್ತುತ್ತಿವೆ. 24x7 ಕೂಂಬಿಂಗ್ ನಡೆಯುತ್ತಿದೆ. ನಕ್ಸಲ್ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆಂದು ಪೊಲೀಸ್ ಇಲಾಖೆ ಗುರುತಿಸಿರುವ, ಜಿಲ್ಲೆಯಿಂದ ಹಲವು ವರ್ಷಗಳಿಂದ ಕಣ್ಮರೆಯಾಗಿರುವ ಕೆಲವರ ಊರುಗಳ ಸುತ್ತ ಈ ತಂಡಗಳ ಪಹರೆ ಇದೆ.
ಮೂಡಿಗೆರೆ ಭಾಗ, ಕಳಸ ಭಾಗದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ, ಶೃಂಗೇರಿ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಎಎನ್ಎಫ್ ತಂಡಗಳು ಗಸ್ತಿನಲ್ಲಿ ತೊಡಗಿವೆ. ಬೆಳಗೋಡು ಕೂಡಿಗೆ, ಸಂಸೆ, ಕೆರೆಕಟ್ಟೆ, ಗಡಿ ಭಾಗ ಸಹಿತ ವಿವಿಧ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಿವೆ.
ತಂಡಗಳು ವಿವಿಧೆಡೆ ಗಸ್ತು ತಿರುಗಿ ಚಟುವಟಿಕೆಗಳನ್ನು ಗಮನಿಸುತ್ತಿವೆ. ಮಂಗಳವಾರ ಮಧ್ಯಾಹ್ನ ಬೆಳಗೋಡು ಕೂಡಿಗೆ ಸುತ್ತಮುತ್ತ ತಂಡವೊಂದು ಬೀಡುಬಿಟ್ಟಿತ್ತು.