ಬೆಂಗಳೂರು: ‘ನೂತನ ಮರಳು ನೀತಿಗೆ ಮುಂದಿನ ಬುಧವಾರ ಅಥವಾ ಗುರುವಾರ ಅಂತಿಮ ರೂಪ ನೀಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಈ ಹಿಂದಿನ ಮರಳು ನೀತಿಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಮೇಲ್ವಿಚಾರಣೆ ಹೊಣೆಯನ್ನು ಜಿಲ್ಲಾ ಪಂಚಾಯಿತಿಗಳಿಗೆ ನೀಡಬೇಕಾ ಅಥವಾ ಲೋಕೋಪಯೋಗಿ ಇಲಾಖೆಗೆ ನೀಡಬೇಕಾ ಎಂಬ ಕುರಿತು ಸಮಾಲೋಚನೆ ನಡೆಸಿದ್ದೇವೆ. ಇ–ಟೆಂಡರ್ ನೀತಿ ಜಾರಿಗೆ ತರುವ ಕುರಿತು ಸಹ ಚರ್ಚೆ ನಡೆಸಲಾಗಿದೆ’ಎಂದರು.
‘ಸಾಮಾನ್ಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನೀತಿ ಜಾರಿಗೆ ತರಲು ಅಧ್ಯಯನಕ್ಕೆ ನಾಲ್ಕು ರಾಜ್ಯಗಳಿಗೆ ಅಧಿಕಾರಿಗಳ ತಂಡ ಕಳುಹಿಸಲಾಗಿತ್ತು. ಈ ತಂಡ ವರದಿ ಸಲ್ಲಿಸಿದೆ. ಅದನ್ನು ಸಹ ಅಧ್ಯಯನ ನಡೆಸಿದ್ದೇವೆ’ ಎಂದು ಅವರು ತಿಳಿಸಿದರು.