ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಕಾಳ್ಗಿಚ್ಚು, ಅರಣ್ಯ ಅಧಿಕಾರಿಗಳ ನಿಟ್ಟುಸಿರು!

ಮಳೆಯ ಜೊತೆಗೆ ಕೈ ಹಿಡಿದ ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು
Last Updated 15 ಜೂನ್ 2018, 10:58 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಬಾರಿ ಸುರಿದ ಮುಂಗಾರು ಪೂರ್ವ ಮಳೆ ರೈತರಿಗೆ ಮಾತ್ರ ಖುಷಿ ಕೊಟ್ಟಿಲ್ಲ; ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಗೂ ಸಂತಸ ನೀಡಿದೆ.

ಸುಮಾರು ಶೇ 50ರಷ್ಟು ಅರಣ್ಯವನ್ನೇ ಹೊಂದಿರುವ ಮತ್ತು ಪ್ರಮುಖ ಅಭಯಾರಣ್ಯಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಎಲ್ಲೂ ಕಾಳ್ಗಿಚ್ಚು ಸಂಭವಿಸಿಲ್ಲ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟಿಸಿರು ಬಿಟ್ಟಿದ್ದಾರೆ. ಜೊತೆಗೆ, ಬೇಗ ಮಳೆಯಾಗಿದ್ದರಿಂದ ಅಭಯಾರಣ್ಯಗಳಲ್ಲಿ ಪ್ರಾಣಿಗಳಿಗೆ ಸಾಕಷ್ಟು ನೀರು, ಮೇವು ಲಭ್ಯವಾಗಿರುವುದು ಅವರ ಸಂತಸಕ್ಕೆ ಮತ್ತೊಂದು ಕಾರಣ.

ಪ್ರತಿ ವರ್ಷ ಒಂದಿಲ್ಲೊಂದು ಕಡೆ ಕಾಳ್ಗಿಚ್ಚು ಉಂಟಾಗಿ ನೂರಾರು ಎಕರೆ ಕಾಡು ನಾಶವಾಗುವುದರ ಜೊತೆ ವನ್ಯಜೀವಿಗಳ ಜೀವಕ್ಕೂ ಸಂಚಕಾರ ಬರುತ್ತಿತ್ತು. ಆದರೆ, ಈ ವರ್ಷ ಬೇಗ ಮಳೆಯಾಗಿರುವುದು ಮತ್ತು ಅರಣ್ಯ ಇಲಾಖೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಈ ಬಾರಿ ಕಾಳ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸಲು ಸಾಧ್ಯವಾಗಿದೆ.

‘ಮಳೆಯಿಂದಾಗಿ ಕಾಳ್ಗಿಚ್ಚು ಅನಾಹುತ ಸಂಭವಿಸಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಅದು ಒಂದು ಕಾರಣ ಹೌದು. ಕಳೆದ ಬಾರಿ ನಾಗರಹೊಳೆಯಲ್ಲಿ ಸಂಭವಿಸಿದ್ದ ಕಾಳ್ಗಿಚ್ಚು ಅನಾಹುತವನ್ನು ಗಮನದಲ್ಲಿರಿಸಿಕೊಂಡು ಈ ಬಾರಿ ನಾವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೆವು’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ ಲಾಲ್‌ ಮೀನಾ ತಿಳಿಸಿದರು.

‘ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಕಾಳ್ಗಿಚ್ಚು ತಡೆಯುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದೆವು. ಕಾಡಿನ ಅಂಚು, ಅರಣ್ಯ ಭಾಗಗಳಲ್ಲಿ ಹಾದುಹೋಗುವ ರಸ್ತೆಗಳು, ಅಭಯಾರಣ್ಯದ ರಸ್ತೆಗಳ ಎರಡೂ ಬದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಳಿಸಿದ್ದೆವು. ನಂತರದ ಹಂತದಲ್ಲಿ ಕಾಡಿನ ಒಳಭಾಗದಲ್ಲಿ ಫೈರ್‌ ಬ್ರೇಕ್‌ಗಳನ್ನು (ನಿರ್ದಿಷ್ಟ ಅಳತೆಗೆ ಗಿಡ ಮರಗಳನ್ನು ಕಡಿದು ಬೆಂಕಿ ಮತ್ತೊಂದು ಕಡೆಗೆ ಬೆಂಕಿ ಹಬ್ಬದಂತೆ ನೋಡಿಕೊಳ್ಳುವ ವ್ಯವಸ್ಥೆ) ನಿರ್ಮಿಸಿದ್ದೆವು. ಆ ಬಳಿಕ, ಬೆಂಕಿ ಮೇಲೆ ನಿಗಾ ಇಡುವುದಕ್ಕಾಗಿ ತಂಡಗಳನ್ನು ರಚಿಸಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬೆಂಕಿ ನಂದಿಸಲು ಬೇಕಾದ ಎಲ್ಲ ಸಲಕರಣೆಗಳನ್ನು ಅವರಿಗೆ ಒದಗಿಸಲಾಗಿತ್ತು’ ಎಂದು ಅವರು ವಿವರಿಸಿದರು.

‘ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್‌ವರೆಗೆ ಕಾಳ್ಗಿಚ್ಚು ಕಂಡು ಬರುತ್ತದೆ. ಕಾಳ್ಗಿಚ್ಚು ಕಂಡು ಬಂದ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂಬ ಉದ್ದೇಶದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಗೋಪುರಗಳನ್ನು ನಿರ್ಮಿಸಿ ಅಲ್ಲಿಯೂ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸುತ್ತಮುತ್ತಲ ಪ್ರದೇಶದ ಮೇಲೆ ಅವರು ಹದ್ದಿನ ಕಣ್ಣು ಇಟ್ಟಿದ್ದರು. ಅವರ ಬಳಿ ವೈರ್‌ಲೆಸ್ ಸಾಧನವೂ ಇತ್ತು. ಎಲ್ಲಿಯಾದರೂ ಹೊಗೆ ಕಂಡ ತಕ್ಷಣ ಅವರು ಉಳಿದ ಸಿಬ್ಬಂದಿಗೆ ಮಾಹಿತಿ ನೀಡಿ, ಬೆಂಕಿ ನಂದಿಸಲು ವ್ಯವಸ್ಥೆ ಮಾಡಿದ್ದೆವು. ಅದಲ್ಲದೇ ಈ ಬಾರಿ ಅಗ್ನಿಶಾಮಕ ದಳದ ನೆರವೂ ಕೇಳಿದ್ದೆವು’ ಎಂದು ಅವರು ಮಾಹಿತಿ ನೀಡಿದರು.

ಇದಲ್ಲದೇ, ವಿದ್ಯಾರ್ಥಿಗಳು, ಕಾಡಿನ ಅಂಚಿನ ಜನರಲ್ಲಿ ಕಾಳ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಅರಣ್ಯ ಇಲಾಖೆ ಮಾಡುತ್ತಿದೆ. ಶಾಲೆಗಳಲ್ಲಿ ಕಾರ್ಯಾಗಾರ, ಬೀದಿ ನಾಟಕದಂತಹ ಕಾರ್ಯಕ್ರಮಗಳನ್ನು ಇಲಾಖೆ ಪ್ರತಿ ವರ್ಷ ನಡೆಸುತ್ತಿದೆ.

‘ಬೇಗ ಮಳೆಯೂ ಬಂತು. ನಾವು ಕೈಗೊಂಡಿದ್ದ ಕ್ರಮವೂ ಯಶಸ್ವಿಯಾಯಿತು. ಹಾಗಾಗಿ ಈ ವರ್ಷ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಇ್ನೂ ನವೆಂಬರ್‌ವರೆಗೆ ಕಾಳ್ಗಿಚ್ಚು ಸಾಧ್ಯತೆ ಕ್ಷೀಣ’ ಎಂದು ವಿಜಯ್‌ ಲಾಲ್‌ ಮೀನಾ ತಿಳಿಸಿದರು.

ಒಣ ಹವೆ ದೀರ್ಘ ಸಮಯ ಇದ್ದಷ್ಟೂ ಕಾಳ್ಗಿಚ್ಚಿನ ಅಪಾಯ ಹೆಚ್ಚು ಎಂದು ಹೇಳುತ್ತಾರೆ ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್‌ಟಿ) ಅರಣ್ಯ ಸಂರಕ್ಷಣಾಧಿಕಾರಿ ಪಿ. ಶಂಕರ್.

‘ಆದರೆ, ಈ ಬಾರಿ ಒಣ ಹವೆ ತುಂಬಾ ದೀರ್ಘ ಅವಧಿವರೆಗೆ ಮುಂದುವರಿಯಲಿಲ್ಲ. ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು ನಮಗೆ ಅನುಕೂಲವಾಯಿತು‘ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೇ 99 ರಷ್ಟು ಸಂದರ್ಭಗಳಲ್ಲಿ ಕಾಳ್ಗಿಚ್ಚು ಕಿಡಿಗೇಡಿಗಳ ಕೃತ್ಯವೇ ಆಗಿರುತ್ತವೆ. ಯಾವುದೋ ಕಾರಣಕ್ಕೆ ಅವರಿಗೆ ಅರಣ್ಯ ಸಿಬ್ಬಂದಿ ಮೇಲೆ ಕೋಪ ಇರುತ್ತದೆ. ಅವರ ಮೇಲಿನ ಸಿಟ್ಟಿಗೆ ಕಾಡಿಗೆ ಬೆಂಕಿ ಹಾಕುತ್ತಾರೆ’ ಎಂದು ಹೇಳಿದರು.

‘ಪ್ರತಿ ವರ್ಷ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ನಮ್ಮ ಕೈ ಮೀರಿ ಕಾಳ್ಗಿಚ್ಚು ಸಂಭವಿಸುತ್ತದೆ. ಈ ಬಾರಿ ಬಿಆರ್‌ಟಿ ವಲಯದಲ್ಲಿ 26 ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸ್ಥಾಪಿಸಿದ್ದೆವು. ಪ್ರತಿ ಶಿಬಿರದಲ್ಲಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು' ಎಂದು ಶಂಕರ್ ವಿವರಿಸಿದರು.

‘ಬೆಳಿಗ್ಗೆ 10ರಿಂದ ಸಂಜೆ 5ರ ನಡುವೆ ಬೆಂಕಿ ಬೀಳುತ್ತದೆ. ಆಗ ಬಿದ್ದರೆ ಆಗುವ ಹಾನಿಯೂ ಹೆಚ್ಚು. ಹಾಗಾಗಿ ಹೆಚ್ಚು ಎಚ್ಚರಿಕೆಯಿಂದ ಇರುತ್ತೇವೆ. ಮೊಬೈಲ್ ಸಿಗ್ನಲ್ ಸಿಗದ ಪ್ರದೇಶಗಳಲ್ಲಿ ಸಿಬ್ಬಂದಿಗೆ ವೈರ್‌ಲೆಸ್ ಕೊಟ್ಟಿರುತ್ತೇವೆ. ಎಲ್ಲಿಯಾದರೂ ದೂರದಲ್ಲಿ ಹೊಗೆ ಕಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT