ಉಡುಪಿ: ಪ್ರಧಾನಿನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ದೇಶ ಸುರಕ್ಷಿತರ ಕೈಯಲ್ಲಿರಬೇಕು ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಲಿಮಾರು ವಿದ್ಯಾಧೀಶ ಶ್ರೀಗಳಿಗೆ ಮನವಿ ಮಾಡಿದರು.
ಮಂಗಳವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪಲಿಮಾರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆಯುವ ಸಂದರ್ಭ ಮನವಿ ಮಾಡಿದರು.
ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶ ಸುರಕ್ಷಿತವಾಗಿರುತ್ತದೆ. ಈ ಕಾರ್ಯಕ್ಕೆ ದೇವರ ಅನುಗ್ರಹ ಸಿಗಬೇಕು ಎಂದು ಸ್ವಾಮೀಜಿ ಬಳಿ ನಿವೇದಿಸಿಕೊಂಡರು.
ಉಡುಪಿ ಜತೆಗೆ ಹಿಂದಿನಿಂದಲೂ ನಂಟು ಇದೆ. ಕೊಲ್ಲೂರು, ಕೃಷ್ಣಮಠದ ಜೊತೆ ನಿರಂತರ ಸಂಪರ್ಕವಿದೆ.ಮುಂದಿನ ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದುನಿರ್ಮಲಾ ಸೀತಾರಾಮನ್ ಹೇಳಿದರು.
ಈ ಸಂದರ್ಭ ಮಾತನಾಡಿದ ಪಲಿಮಾರು ಶ್ರೀಗಳು,‘ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಉಡುಪಿಗೆ ಕಳುಹಿಸಿಕೊಡಬೇಕು. ಅಭಿನಂದನ್ ಪರಾಕ್ರಮ ಬಹಳ ಮೆಚ್ಚುಗೆಯಾಗಿದೆ. ಕೃಷ್ಣಮಠದಲ್ಲಿ ಅವರಿಗೆ ಗೌರವಾರ್ಪಣೆ ಮಾಡಬೇಕು ಎಂದು ಸಚಿವೆಯ ಬಳಿ ಕೇಳಿದರು.
ಕಾನೂನಾತ್ಮಕ ಅಡೆ ತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ರಕ್ಷಣಾ ಇಲಾಖೆಗೆ ಒಂದು ಪತ್ರ ಬರೆಯುವಂತೆ ತಿಳಿಸಿದರು.
ಈ ಸಂದರ್ಭ ಶಾಸಕರಾದ ರಘುಪತಿ ಭಟ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇದ್ದರು.