ಚಾಮರಾಜನಗರ: ‘ರಾಜ್ಯದಲ್ಲಿ ಮದ್ಯಪಾನ ನಿಷೇಧ ಆಗಬೇಕು ಎಂಬುದು ನನ್ನ ನಿಲುವು. ಸರ್ಕಾರ ಹೊಸ ಬಾರ್ಗಳನ್ನು ತೆರೆಯಲು ಅನುಮತಿ ನೀಡುವುದಕ್ಕೆ ನನ್ನ ವಿರೋಧವಿದೆ’ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ಇಲ್ಲಿ ಹೇಳಿದರು.
ತಾಲ್ಲೂಕಿನಬದನಗುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಈಗಿನ ಸರ್ಕಾರ ಒಂದು ಸಾವಿರ ಬಾರ್ಗಳಿಗೆ ಅನುಮತಿ ನೀಡುತ್ತಿದೆ ಎಂಬ ವರದಿಯನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಈ ರೀತಿಯ ಯಾವುದೇ ಪ್ರಸ್ತಾಪ ಇಲ್ಲ. ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿಲ್ಲ. ಒಂದು ವೇಳೆ, ಸರ್ಕಾರ ಹೊಸ ಬಾರ್ಗಳಿಗೆ ಅನುಮತಿ ನೀಡಲು ಮುಂದಾದರೆ ಸಚಿವನಾಗಿ ವಿರೋಧಿಸುತ್ತೇನೆ’ ಎಂದರು.
ಗಾಂಧಿ ಜಯಂತಿ ಸಂದರ್ಭದಲ್ಲಿಮದ್ಯಪಾನಮುಕ್ತ ಭಾರತ ಮಾಡಲು ಕೇಂದ್ರ, ರಾಜ್ಯ ಸರ್ಕಾರಗಳು ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಮೊದಲಿಗೆರಾಜ್ಯ ಸರ್ಕಾರ ಈ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.